ವೈದ್ಯನ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ನಂಬಿಸಿ 1.16 ಕೋಟಿ ರೂ. ವಂಚನೆ | JANATA NEWS
ಬೆಂಗಳೂರು : ಖಾಸಗಿ ಕಾಲೇಜಿನಲ್ಲಿ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ವೈದ್ಯನನ್ನು ನಂಬಿಸಿ 1.16 ಕೋಟಿ ರೂ ಪಡೆದು ವಂಚಿಸಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಅಳಂದದಲ್ಲಿ ವೈದ್ಯ ವೃತ್ತಿ ಮಾಡುತ್ತಿರುವ ಶಂಕರ್ ಬಾಬುರಾವ್ ತಮ್ಮ ಮಗನಿಗೆ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವ ಆಸೆ ಹೊಂದಿದ್ದರು. ಹಲವು ಸಲ ಬೆಂಗಳೂರಿಗೆ ತಿರುಗಾಡಿದರೂ ಸೀಟು ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಎಂಟು ವರ್ಷಗಳಿಂದ ಪರಿಚಿತನಾಗಿದ್ದ ನಾಗರಾಜ್ ತನಗೆ ಮೆಡಿಕಲ್ ಕಾಲೇಜೊಂದರಲ್ಲಿ ಪರಿಚಯಸ್ಥರಿದ್ದಾರೆ, ಅಲ್ಲಿ ಮಗನಿಗೆ ಸೀಟು ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾನೆ.
ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಮಗನಿಗೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 66 ಲಕ್ಷ ರೂ. ಹಣವನ್ನು ನಾಗರಾಜ್ ಪಡೆದಿದ್ದ. ಹಂತ ಹಂತವಾಗಿ 1.16 ಕೋಟಿ ರೂ. ಹಣ ಪಡೆದಿದ್ದ.
ಒಂದು ವರ್ಷವಾದರೂ ಶಂಕರ್ ಬಾಬುರಾವ್ ಅವರ ಪುತ್ರನಿಗೆ ಮೆಡಿಕಲ್ ಸೀಟು ಕೊಡಿಸಲಾಗಲಿಲ್ಲ. ತನ್ನ ಹಣ ವಾಪಸು ನೀಡುವಂತೆ ಶಂಕರ್ ಸ್ನೇಹಿತ ನಾಗರಾಜ್ಗೆ ಬೇಡಿಕೆ ಇಟ್ಟಿದ್ದ. ಕೆಲ ದಿನಗಳ ಹಿಂದೆ ಹಣ ವಾಪಸು ಕೊಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದ.
ಗಾಂಧಿನಗರದ ಲಾಡ್ಜ್ನಲ್ಲಿ ಶಂಕರ್ ರೂಮ್ ಬುಕ್ ಮಾಡಿ, ನಂತರ ಮಹಾರಾಷ್ಟ್ರ ಮೂಲದ ಲೈಂಗಿಕ ಕಾರ್ಯಕರ್ತೆಯರನ್ನು ರೂಮ್ಗೆ ಕಳುಹಿಸಿ, ಅವರು ಫೋಟೊ ಕ್ಲಿಕ್ಕಿಸಿಕೊಳ್ಳುವಂತೆ ಮಾಡಿ ಹನಿಟ್ರ್ಯಾಪ್ ಯತ್ನ ಮಾಡಿದ್ದಾನೆ.
ಅಷ್ಟೇ ಅಲ್ಲ, ಮಧ್ಯರಾತ್ರಿ ಪೊಲೀಸರ ವೇಷದಲ್ಲಿ ಕೆಲವರು ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ ಎಂದು ಶಂಕರ್ಗೆ ಬೆದರಿಸಿದ್ದಾರೆ. ಬಳಿಕ ಶಂಕರ್ ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗದಿರಲು 50 ಲಕ್ಷ ರೂ. ನೀಡುವಂತೆ ಆರೋಪಿಗಳು ಶಂಕರ್ ಅವರಿಗೆ ಬೇಡಿಕೆ ಇಟ್ಟಿದ್ದಾರೆ.
ಹಣ ನೀಡದೆ ಹೋದರೆ ನಿನ್ನನ್ನು ಬಂಧಿಸುತ್ತಾರೆ, ಆಗ ನಿನ್ನ ಮಾನ-ಮರ್ಯಾದೆ ಹೋಗಲಿದೆ ಎಂದು ನಾಗರಾಜ್ ಬೆದರಿಸಿದ್ದಾನೆ. ಇದಕ್ಕೆ ಅಂಜಿದ ಶಂಕರ್ ಊರಿಗೆ ಹೋಗಿ ಹಣ ನೀಡುವುದಾಗಿ ಒಪ್ಪಿಕೊಂಡು, ಕಲಬುರಗಿಗೆ ಬಂದು ಖಾಸಗಿ ಬ್ಯಾಂಕ್ನಲ್ಲಿ 50 ಲಕ್ಷ ರೂ. ಸಾಲ ಪಡೆದು ಆರೋಪಿಗಳ ಕೈಗೆ ತಂದಿಟ್ಟಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಷ್ಟಕ್ಕೆ ಸುಮ್ಮನಾಗದ ವಂಚಕ ನಾಗರಾಜ್ ಮತ್ತು ಟೀಂ, ನಿಮ್ಮ ಕೇಸಿನಲ್ಲಿ ಜೈಲಿಗೆ ಹೋಗಿರುವ ಇಬ್ಬರು ಹುಡುಗಿಯರಿಗೆ ಜಾಮೀನು ಕೊಡಿಸಲು 20 ಲಕ್ಷ ರೂ. ಬೇಕಾಗಿದೆ. ಈ ಕೂಡಲೆ ನೀವು ಕೊಡದಿದ್ದರೆ, ಅವರು ನೀವು ಸಿಕ್ಕಿಬಿದ್ದಿರುವ ವಿಚಾರವನ್ನು ಬಹಿರಂಗ ಮಾಡಲಿದ್ದಾರೆ ಎಂದು ನಾಗರಾಜ್ ಪುನಃ ಹೆದರಿಸಿದ್ದಾನೆ. ತಾನು ಮೋಸ ಹೋಗಿರುವ ವಿಚಾರ ತಿಳಿದ ವೈದ್ಯ ಶಂಕರ್ ಆ ಬಳಿಕ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಲಬುರಗಿಯ ಆಳಂದ ಮೂಲದ ವೈದ್ಯ ಶಂಕರ್ ಬಾಬುರಾವ್ ನೀಡಿದ ದೂರಿನ ಮೇರೆಗೆ ವಂಚಕರಾದ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್ ಹಾಗೂ ಹಮೀದ್ ಎಂಬುವವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.