ನಿಗಮ ಮಂಡಳಿ ಅಧ್ಯಕ್ಷರ-ಉಪಾಧ್ಯಕ್ಷರ ನಾಮನಿರ್ದೇಶನವನ್ನ ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ | JANATA NEWS
ಬೆಂಗಳೂರು : ಬಿ.ಎಸ್.ಯಡಿಯೂರಪ್ಪರ ಕಾಲದಲ್ಲಿ ರಾಜ್ಯಮಟ್ಟದ ನಿಗಮ-ಮಂಡಳಿ ಪ್ರಾಧಿಕಾರಗಳಿಗೆ ನೇಮಕವಾಗಿದ್ದ ಅಧ್ಯಕ್ಷರ-ಉಪಾಧ್ಯಕ್ಷರ ನಾಮನಿರ್ದೇಶನವನ್ನ ರದ್ದು ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಬೊಮ್ಮಾಯಿ 52 ನಿಗಮ ಅಧ್ಯಕ್ಷರನ್ನು ನಾಮ ನಿರ್ದೇಶವನ್ನು ರದ್ದು ಪಡಿಸಿದ್ದಾರೆ. ಅಚ್ಚರಿ ಎಂದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರಾಗಿರುವ ನಿವೃತ್ತ ಸಿಎಸ್ ರತ್ನಪ್ರಭಾ, ನಟಿ ಶೃತಿ, ಶಿವಮೊಗ್ಗದ ಎಸ್.ದತ್ತಾತ್ರಿ ಮತ್ತು ಬಿ.ವೈ.ವಿಜಯೇಂದ್ರ ಆಪ್ತ ತಮ್ಮೇಶ್ ಗೌಡ ಹಾಗೂ ಸೇರಿದಂತೆ ಬಿವೈಎಸ್ ಆಪ್ತರನ್ನು ಕೈಬಿಡಲಾಗಿದೆ. ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಪಕ್ಷದ ಕೆಲ ಶಾಸಕರು ಹಾಗೂ ಮಾಜಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಲಾಗಿದೆ.
ಖಾಲಿಯಾಗಿರುವ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಗಳಿಗೆ ಇನ್ನೆರಡು ದಿನದಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ. ಈ ಆದೇಶ ಇಂದೇ ಜಾರಿಯಾಗಿದೆ. ಜು.14ರಂದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪಟ್ಟಿ ಪ್ರಕಟವಾಗಲಿದೆ.
ನಿಗಮ-ಮಂಡಳಿ-ಪ್ರಾಧಿಕಾರಕ್ಕೆ ನಡೆದಿದ್ದ ನಾಮನಿರ್ದೇಶನ ರದ್ದತಿಯ ಹಠಾತ್ ಪ್ರಕ್ರಿಯೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷದಲ್ಲಿ ಸಂಚಲನ ಹುಟ್ಟು ಹಾಕಿದೆ.