ಅಪಾರ್ಟ್ಮೆಂಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆಯಿಟ್ಟ ಬೆಂಗಳೂರಿನ ಇಂಜಿನಿಯರ್ ಎಸಿಬಿ ಬಲೆಗೆ | JANATA NEWS
ಬೆಂಗಳೂರು : ಅಪಾರ್ಟ್ಮೆಂಟ್ಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವೇಳೆ ಸಹಾಯಕ ಇಂಜಿನಿಯರ್ ಒಬ್ಬರನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆನ್ಸನ್ಟೌನ್ನ ಬೆಸ್ಕಾಂ ಕಚೇರಿಯಲ್ಲಿ 1,30,000 ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಎಇ ಹನುಮಂತಪ್ಪ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬೆಂಗಳೂರಿನ ನಿವಾಸಿಯೊಬ್ಬರು ತಾವು ಬೆನ್ಸ್ನ್ ಟೌನ್ ಮಾರಪ್ಪ ಗಾರ್ಡನ್ನಲ್ಲಿ ನಿರ್ಮಿಸಿರುವ ಅಪಾರ್ಟ್ಮೆಂಟ್ಗೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಲಂಚ ಕೇಳಿರುವುದಾಗಿ ಆರೋಪಿಸಿ, ಈ ಬಗ್ಗೆ ದೂರು ದಾಖಲು ಮಾಡಿದ್ದರು..
ಅಪಾರ್ಟ್ಮೆಂಟ್ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 2021ರ ಅಕ್ಟೋಬರ್ ನಲ್ಲಿ ದೂರುದಾರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ದೂರುದಾರರ ಬಳಿ ಎಇ ಹನುಮಂತಪ್ಪ 3 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಂತರ 1.60 ಲಕ್ಷಕ್ಕೆ ಡೀಲ್ ಕುದುರಿಸಿದ್ದರು.
ದೂರುದಾರರಿಂದ 1.60 ಲಕ್ಷದ ಪೈಕಿ 1.3 ಲಕ್ಷ ರೂ. ಹಣ ಪಡೆಯುತ್ತಿರುವಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.