ಕಾಂಗ್ರೆಸ್ನವರೇ, ನಿಮಗೆ ಒಳ್ಳೆಯದು ಮಾಡೋಕೆ ಆಗಿಲ್ಲ ಅಂದರೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ | JANATA NEWS
ಬೆಂಗಳೂರು : ಬಿಜೆಪಿ ಪಕ್ಷ ಮತ್ತು ನಮ್ಮ ಸರ್ಕಾರ ಜನರ ಪರವಾಗಿರುವ ಸರ್ಕಾರವಾಗಿದೆ ಹೊರತು ಇದು ಯಾವುದೋ ಕಾಂಗ್ರೆಸ್, ಜೆಡಿಎಸ್ ನಂತೆ ಖಾಸಗಿ ಕಂಪನಿಯಲ್ಲ ಎಂದು ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡ್ತಿದ್ದೇವೆ. ನಮ್ಮಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಇವೆರಡರಲ್ಲಿ ಕುಟುಂಬಕ್ಕಷ್ಟೇ ಅಧಿಕಾರ. ಕಾಂಗ್ರೆಸ್ನಲ್ಲಿ ಸೋನಿಯಾ ಗಾಂಧಿ ಕಂಪನಿ, ರಾಹುಲ್ ಗಾಂಧಿ ಕಂಪನಿ, ಪ್ರಿಯಾಂಕಾ ಗಾಂಧಿ ಕಂಪನಿ ಇರುವುದು. ರಾಮನಗರದಲ್ಲಿ ಕುಮಾರಸ್ವಾಮಿ ಕಂಪನಿ ಇದೆ. ಈ ಸಮಾಜದಲ್ಲಿ ಯಾವುದಾದರೂ ಅರ್ಥ ಇಲ್ಲದೆ ಇರೋ ಪಕ್ಷಗಳು ಅಂದರೆ ಅದು ಇವುಗಳೇ. ಬರುವ ಚುನಾವಣೆಯಲ್ಲಿ ರಾಮನಗರದಲ್ಲಿ ನಾವು ಮೆಜಾರಿಟಿ ತೆಗೆದುಕೊಳ್ತೇವೆ. ಅಲ್ಲಿ ಎಲ್ಲಾ ತರ ಇದ್ದಾರೆ, ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ನಾಟಕ ಮಾಡ್ತಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗಾದರೂ ಚೆನ್ನಾಗಿ ನಾಟಕ ಮಾಡಲು ಬರುತ್ತದೆ ಅಂದರೆ ಅದು ಸಿದ್ದರಾಮಯ್ಯನವರಿಗೆ ಮಾತ್ರ. ನಾಟಕದ ಅನುಭವವನ್ನು ಅವರು ಬೇರೆಯವರಿಗೆ ಹೇಳ್ತಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡೋದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲಿ ತಪ್ಪು ಕಂಡು ಹಿಡಿಯೋದು, ದೋಷ ಎತ್ತಿ ಹಿಡಿಯೋದು ಸರಿಯಲ್ಲ ಎಂದರಲ್ಲದೇ, ಕಾಂಗ್ರೆಸ್ನವರೇ, ನಿಮಗೆ ಒಳ್ಳೆಯದು ಮಾಡೋಕೆ ಆಗಿಲ್ಲ ಅಂದರೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಒಳ್ಳೆಯದು ಮಾಡಲು ಯೋಗ್ಯತೆ ಇಲ್ಲ ಅಂದರೆ ಕೆಟ್ಟದ್ದನ್ನು ಹೇಳಬೇಡಿ. ನಿಮ್ಮ ಭಕ್ತಿ ದೇಶದ ಮೇಲೆ ಇದ್ದರೆ ತಮ್ಮ ಕರ್ತವ್ಯದ ಮೂಲಕ ಮಾಡಿ. ಅದು ಬಿಟ್ಟು ಇಂತಹ ಡೋಂಗಿ ಹೇಳಿಕೆಗಳನ್ನು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.
ಅಧಿವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುವ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಿದ್ಯಪ್ಪಾ ಕುಮಾರಸ್ವಾಮಿ..? ಅಧಿವೇಶನ ನಡೆದರೆ ಕುಮಾರಸ್ವಾಮಿ ಸದನಕ್ಕೆ ಬರುವುದಿಲ್ಲ. ಎಲ್ಲಿದ್ದಿ ಕುಮಾರಸ್ವಾಮಿ ಎಂದು ಅವರನ್ನು ಹುಡುಕಬೇಕು. ಸದನ ಕರೀರಿ ಅನ್ನೋದು, ಆಮೇಲೆ ಬರದೆ ಇರೋದು. ಸಿದ್ದರಾಮಯ್ಯ ಮಾತಿನಂತೆ ಇವರೂ ಮಾತಾಡ್ತಿರೋದು. ಬಾಯಿಗೆ ಬಂದಂತೆ ದಿಕ್ಕು ಇಲ್ಲದಂತೆ ಗುಂಡು ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.