ಆಷಾಢ ಮಾಸಕ್ಕೆ ತವರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾಗಿದ್ದ ನವವಧು ಆತ್ಮಹತ್ಯೆ | JANATA NEWS
ಮೈಸೂರು : ಆಷಾಢ ಮಾಸದ ಹಿನ್ನೆಲೆ ತವರು ಮನೆಗೆ ಬಂದಿದ್ದ ನವವಧು ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಳು. ನಂತರ ಅವರಿಬ್ಬರನ್ನೂ ಬಲವಂತವಾಗಿ ವಾಪಸ್ ಕರೆತರಲಾಗಿತ್ತು, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತರನ್ನು ವರ್ಷಿತಾ (20) ಎಂದು ಗುರುತಿಸಲಾಗಿದೆ. ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮಗಳ ಮನವೊಲಿಸಿ ಚಾಮರಾಜನಗರದ ಯುವಕನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಆಷಾಢ ಮಾಸದ ಹಿನ್ನೆಲೆ ಕಳೆದ ತಿಂಗಳು ತವರು ಮನೆಗೆ ಬಂದಿದ್ದಾಗ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪರಾರಿಯಾಗಿದ್ದ ವರ್ಷಿತಾ ಹಾಗೂ ಕಿರಣ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಬೇರ್ಪಡಿಸಿದ್ದರು. ಬಳಿಕ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ 3 ದಿನ ಇದ್ದು ಬಳಿಕ ರಾಂಪುರದಲ್ಲಿರುವ ತಾತನ ಮನೆಗೆ ಬಂದಿದ್ದರು.
ಪ್ರಿಯಕರನ ಅಗಲಿಕೆಯಿಂದ ಮನನೊಂದಿದ್ದ ವರ್ಷಿತಾ ತಾತನ ಮನೆಯ ವಾಶ್ ರೂಂನಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.