ಸನ್ಯಾಸತ್ವ ತ್ಯಜಿಸಿ ಯುವತಿ ಜೊತೆ ಎಸ್ಕೇಪ್! | JANATA NEWS
ರಾಮನಗರ : ಮಾಗಡಿ ತಾಲೂಕಿನ ಸೋಲೂರ ಗದ್ದುಗೆ ಮಠದ ಸ್ವಾಮೀಜಿ ತಾವೂ ಪ್ರೀತಿಸುತ್ತಿದ್ದ ವಿವಾಹತೆ ಜೊತೆಗೆ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಸ್ವಾಮೀಜಿ ಯುವತಿಯೊಬ್ಬಳ ಜೊತೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮದುವೆಯಾಗಿದ್ದವಳ ಜೊತೆ ಸ್ವಾಮೀಜಿ ತೆರಳಿದ್ದಾರೆ ಅಂತ ಹೇಳಲಾಗುತ್ತಿದೆ.
ವಿವಾಹವಾಗಿ ಕೇವಲ ಒಂದೂವರೆ ತಿಂಗಳಾಗಿದ್ದ ಯುವತಿ ಜೊತೆ ಸೋಲೂರಿನ ಗದ್ದುಗೆ ಮಠದ ಶಿವಮಹಂತ ಸ್ವಾಮೀಜಿ ಎಸ್ಕೇಪ್ ಆಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಮಠ ಬಿಟ್ಟು ಹೋಗುತ್ತಿರುವುದಾಗಿ ಹಾಗೂ ತಮ್ಮ ನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದು ಪರಾರಿಯಾಗಿದ್ದಾರೆ.
ಸ್ವಾಮೀಜಿ ಬರೆದ ಪತ್ರದಲ್ಲಿ ಏನಿದೆ?
ನಾನು ನನ್ನ ಸ್ವಾಮೀಜಿ ಜೀವನ ತ್ಯಜಿಸುತ್ತಿದ್ದೇನೆ. ಕಾರಣ ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣಕ್ಕಾಗಿ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜಿಗುಪ್ಸೆ ಉಂಟು ಮಾಡಿದೆ. ಈ ಕಾರಣ ನಿಮಗೆಲ್ಲ ಗೊತ್ತಿದೆ ಅಂತ ಭಾವಿಸುತ್ತೇನೆ. ದಯವಿಟ್ಟು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆಯನ್ನು ತ್ಯಜಿಸಿದ ಮೇಲೆ ಮತ್ತೆಂದೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಿ ಅಂತ ಪತ್ರದಲ್ಲಿ ಸ್ವಾಮೀಜಿ ಎಚ್ಚರಿಸಿದ್ದಾರೆ.
ಈ ಹಿಂದೆ ಇದೇ ಸ್ವಾಮೀಜಿ ಬೇರೆ ಮಠದಲ್ಲಿರುವಾಗ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಆಕೆಗೆ ಕಳೆದ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿತ್ತು ಅಂತ ಹೇಳಲಾಗುತ್ತಿದೆ. ಅದೇ ಹುಡುಗಿ ಜೊತೆ ಶಿವಮಹಂತಸ್ವಾಮಿ ಅಲಿಯಾಸ್ ಹರೀಶ್ ಪರಾರಿಯಾಗಿರುವ ಶಂಕೆ ಇದೆ.