ಸಿದ್ದರಾಮಯ್ಯ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದರು | JANATA NEWS
ಮೈಸೂರು : ಸಿದ್ದರಾಮಯ್ಯ ಅವರು 2017ರಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಾಟಿ ಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ? ಏಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪಸಿಂಹ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ. ಅವರು ಕೂಡ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಎಂದು ಕೇಳಿ? ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ. ಮೊನ್ನೆ ಸಿದ್ದರಾಮೇಶ್ವರ ಜಾತ್ರೆಗೆ ಏಕೆ ಸಿಹಿ ಊಟ ಹಾಕಿಸಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ನಾಟಿ ಕೋಳಿ ತಿಂದು ಪುಷ್ಪಾರ್ಚನೆ ಮಾಡಿರುವುದಕ್ಕೆ ನಾನೇ ಸಾಕ್ಷಿ. ಈ ಕಾರಣದಿಂದ ಅವರಿಗೆ ಮುಂದಿನ ದಸರಾದಲ್ಲಿ ಪುಷ್ಪಾರ್ಚನೆ ಮಾಡಲು ಚಾಮುಂಡೇಶ್ವರಿ ಕರುಣಿಸಲಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.
2017ರಲ್ಲಿ ದಸರಾ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು. ಮಧ್ಯಾಹ್ನ ಲಲಿತ್ ಮಹಲ್ನಲ್ಲಿ ಊಟ ಇತ್ತು. ನಾಟಿ ಕೋಳಿ ತಿಂದುಕೊಂಡು ಕೋಟೆ ಆಂಜನೇಯ ಎದುರಗಡೆ ನಂದಿಗೆ ಪೂಜೆ ಮಾಡಿದರು. ಆ ನಂತರ ಜಂಬು ಸವಾರಿ ಪ್ರಾರಂಭವಾಯಿತು. ಬಳಿಕ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಈ ಘಟನೆ ಬಳಿಕ ಮತ್ತೆ ಯಾವತ್ತೂ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಅವಕಾಶ ಸಿಕ್ಕಿರಲಿಲ್ಲ ಎಂದರು
ಹಂದಿ ಸಹಾ ಆಹಾರ ಪದ್ದತಿ. ಅದನ್ನು ತಿನ್ನಬೇಡಿ ಅಂತಾ ಯಾವ ದೇವರು ಹೇಳಿಲ್ಲ. ಜಮೀರ್ ಅಹಮದ್ ಹಾಗೂ ಆತನ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಿ, ನೀವು ಅದನ್ನು ಹೇಳುವುದಿಲ್ಲ. ನಿಮಗೆ ಆ ರೀತಿ ಹೇಳಲು ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.