ವೀರ ಸಾವರ್ಕರ್ ರಥಯಾತ್ರೆಗೆ ಯಡಿಯೂರಪ್ಪ ಚಾಲನೆ | JANATA NEWS
ಮೈಸೂರು : ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಸೂರಿಗೆ ವಿಶಿಷ್ಟ ಸ್ಥಾನ ಇದೆ. ಇಂಥ ಪುಣ್ಯಭೂಮಿಯಲ್ಲಿ ಸಾವರ್ಕರ್ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಇದನ್ನು ನನ್ನ ಸೌಭಾಗ್ಯ ಎಂದೇ ಭಾವಿಸಿದ್ದೇನೆ ಎಂದು ಸಾವರ್ಕರ್ ರಥಯಾತ್ರೆಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಸಾವರ್ಕರ್ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಯಿತು.
ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದಲೇ ಸಾವರ್ಕರ್ ಅವರು ವೀರ ಸಾವರ್ಕರ್ ಎಂದು ಕರೆಸಿ ಕೊಂಡರು. ಆದರೆ, ರಾಜ್ಯದಲ್ಲಿ ಸಾವರ್ಕರ್ ವಿರುದ್ಧ ಅಪ್ರಚಾರ ನಡೆಯುತ್ತಿದೆ. ಚಿಲ್ಲರೆ ರಾಜಕಾರಣಕ್ಕಾಗಿ ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಸಾವರ್ಕರ್ ಭಾರತೀಯ ಮಾತೆಯ ಹೆಮ್ಮೆಯ ಪುತ್ರ. ಸ್ವಾತಂತ್ರ್ಯ ಹೋರಾಟದ ಜೊತೆಗೆ ಹಿಂದೂ ಧರ್ಮದ ಸುಧಾರಣೆಗೆ ತೊಡಗಿಸಿ ಕೊಂಡಿದ್ದವರು ಸಾವರ್ಕರ್. ಸಾವರ್ಕರ್ ಚಿಂತನೆಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು. ಯುವಕರಿಗೆ ಸಾವರ್ಕರ್ ಚರಿತ್ರೆ ಗೊತ್ತಿಲ್ಲ. ಹೀಗಾಗಿ ಕೆಲವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದೊಳಗಿನ ವಿದ್ರೋಹಿಗಳಿಗೆ ಎಚ್ಚರಿಕೆ ನೀಡುವ ರಥಯಾತ್ರೆ ಇದು. ಹನುಮಂತನು ರಾಕ್ಷಸರನ್ನು ಸದೆಬಡಿದು ವೀರಾಂಜನೇಯನೂ ಆದ. ಅವನ ಸನ್ನಿಧಿಯಲ್ಲಿಯೇ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡೋಣ ಎಂದು ಕರೆ ನೀಡಿದರು.