ರಾಜ್ಯ ಸರ್ಕಾರದಲ್ಲಿ ಸಿಎಂ, ಸಚಿವರು, ಶಾಸಕರಿಂದ 40% ಕಮಿಷನ್ ಗೆ ಬೇಡಿಕೆ: ಕೆಂಪಣ್ಣ | JANATA NEWS
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಮತ್ತೊಮ್ಮೆ 40% ಕಮಿಷನ್ ಆರೋಪ ಗುತ್ತಿಗೆದಾರರಿಂದ ಕೇಳಿಬರುತ್ತಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿದೆ.
ಇಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಸಚಿವರುಗಳು, ಶಾಸಕರು ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ ಈ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆಯಲು ಗುತ್ತಿಗೆದಾರ ಕೆಂಪಣ್ಣ ಟೀಂ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಗುತ್ತಿಗೆದಾರರ ಸಂಘ ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಕಮಿಷನ್ ಕಂಟಕ ಎದುರಾಗಿದೆ.
ಸರ್ಕಾರದ ಸಚಿವರು, ಶಾಸಕರು ಲಂಚ, ಭ್ರಷ್ಟಾಚಾರದಲ್ಲಿ ನಂಬರ್ 1, 2 ಸ್ಥಾನದಲ್ಲಿದ್ದಾರೆ. ಗುತ್ತಿಗೆದಾರರಿಂದ ಕಾಮಗಾರಿ ಹಣದಲ್ಲಿ ಶೇಕಡಾ 40ರಷ್ಟು ಲಂಚ ಪಡೆಯುತ್ತಾರೆ. ಅವರಿಗೆ ಇಷ್ಟೊಂದು ಲಂಚ ಹೋದರೆ ಉಳಿದ ಹಣದಲ್ಲಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ, ಗುತ್ತಿಗೆದಾರರು ಜನಪ್ರತಿನಿಧಿಗಳ ಕಿರುಕುಳದಿಂದ ನಲುಗಿ ಹೋಗುತ್ತಿದ್ದಾರೆ ಎಂದು ಕೆಂಪಣ್ಣ ಆರೋಪಿಸಿದ್ದಾರೆ.
ಗುತ್ತಿಗೆದಾರರು ತಾವು ನಡೆಸಿದ ಕಾಮಗಾರಿಗಳ ಬಿಲ್ ಗಳನ್ನು ಕ್ಲೀಯರ್ ಮಾಡಿಸಿಕೊಳ್ಳಲು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮತ್ತಯ ಮಧ್ಯವರ್ತಿಗಳಿಗೆ ಶೇಕಡಾ 40 ರಷ್ಟು ಲಂಚ ನೀಡುತ್ತಿರುವುದು ನಿಜ ಎಂದು ಹೇಳಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬುಧವಾರದಂದು ಸಂಘದ ಸುಮಾರು 30 ಪದಾಧಿಕಾರಿಗಳೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿಮಾಡಿ ಮಾತುಕತೆ ನಡೆಸಿದರು.