ಇದು ಕಳಪೆ ಕಾಮಗಾರಿ ಅಲ್ವಾ? ಪ್ರತಾಪ್ ಸಿಂಹ ಎನ್ ದೊಡ್ಡ ಇಂಜಿನಿಯರಾ? ಅವನಿಂದ ನಾನು ಕಲಿಬೇಕಾ? | JANATA NEWS
ರಾಮನಗರ : ಅವನೇನು ದೊಡ್ಡ ಇಂಜಿನಿಯರಾ? ಯಾವುದೋ ಬರಹ ಬರೆದುಕೊಂಡು ಇದ್ದ. ನರೇಂದ್ರ ಮೋದಿ ಹೆಸರಲ್ಲಿ ಗೆದ್ದು ರಾಜಕೀಯ ಮಾಡ್ತಿದ್ದಾನೆ. ಅವನ ಹತ್ತಿರ ನಾನು ಕಲಿಬೇಕಾ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಕೆರಳಿಸಬೇಡಿ. ಬೆಂಗಳೂರು ಮೈಸೂರು ಹೆದ್ದಾರಿಯ ನೀರು ಯಾಕ್ ನಿಂತಿತ್ತು. ಇದು ಕಳಪೆ ಕಾಮಗಾರಿ ಅಲ್ವಾ..? ನಾನು ವೈಜ್ಞಾನಿಕವಾಗಿ ಹೇಳ್ತಾ ಇದೀನಿ. ಎಷ್ಟು ಕಡೆ ಪ್ರತಾಪ್ ಸಿಂಹ ಹೋಗಿದ್ದಾನೆ. ಪೋಟೊ ತೆಗೆಸಿಕೊಳ್ಳೋದಕ್ಕೆ ಬಂದಿದ್ನಲ್ಲಾ ಈಗ ಎಷ್ಟು ಕಡೆ ಬಂದಿದ್ದಾನೆ. ಜನರ ಕಷ್ಟ ಸುಖ ನೋಡಿ ರಾಜಕೀಯ ಮಾಡಿದ್ರೆ ಗೊತ್ತಾಗಿರೋದು. ಪಕ್ಷದ ಹಾಗೂ ಮೋದಿ ಹೆಸರಲ್ಲಿ ಓಟಾಕಿಸ್ಕೊಂಡು ಎಂಪಿಗಳಾಗಿದ್ದಾವೆ ಎಂದು ಕಿಡಿಕಾರಿದರು.
ರಸ್ತೆಗಳಲ್ಲಿ ನೀರು ನಿಂತಿದೆಯಲ್ಲ, ಅದಕ್ಕೆ ಕಾರಣ ಯಾರು? ಅಕ್ರಮವಾಗಿ ನಿರ್ಮಾಣ ಆಗಿರುವುದನ್ನು ನಾವು ತೆರವು ಮಾಡಿಸುತ್ತೇವೆ. ಅದು ಒಂದು ಭಾಗ. ಆದರೆ, ಎಕ್ಸ್ ಪ್ರೆಸ್ ಹೈವೇ ಕಾಮಗಾರಿ ಪ್ರಾರಂಭ ಆದಮೇಲೆ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರತಾಪ್ ಸಿಂಹ ಏನು ದೊಡ್ಡ ಎಂಜಿನಿಯರ್ ಏನ್ರೀ? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಅದೆಲ್ಲೋ ಬರವಣಿಗೆ ಮಾಡಿಕೊಂಡು ಇದ್ದ ವ್ಯಕ್ತಿ ಪ್ರತಾಪ್ ಸಿಂಹ ಈಗ ನರೇಂದ್ರ ಮೋದಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರಿಂದ ನಾನು ಕಲಿಯಬೇಕಾ? ಅವರು ಸುಖಾ ಸುಮ್ಮನೆ ನನ್ನನ್ನು ಕೆರಳಿಸುವುದು ಬೇಡ. ಹೆದ್ದಾರಿಯಲ್ಲಿ ನೀರು ನಿಂತದ್ದು ಒತ್ತುವರಿಯಿಂದನಾ? ಅದು ಆಗಿರುವುದು ಕಳಪೆ ಕಾಮಗಾರಿಯಿಂದ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.