ನವಜಾತ ಶಿಶು ಪ್ಲಾಸ್ಟಿಕ್ ಕವರ್ನಲ್ಲಿಟ್ಟು ಮರಕ್ಕೆ ನೇತು ಹಾಕಿದ್ದ ಆರೋಪಿ ಬಂಧನ | JANATA NEWS
ಬೆಳಗಾವಿ : ನವಜಾತ ಶಿಶುವೊಂದನ್ನು ಮರಕ್ಕೆ ನೇತು ಹಾಕಿದ ಚೀಲದಲ್ಲಿ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಡೆದಿತ್ತು.
ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೋಕ್ಸೋ ಪ್ರಕರಣದಡಿ ಒಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನೆರಸಾ - ಗೌಳಿವಾಡ ಗ್ರಾಮದ ಮಲ್ಲು ಪಿಂಗಳೆ (19) ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ಆರು ದಿನಗಳ ಹಿಂದೆ ಪ್ಲ್ಯಾಸ್ಟಿಕ್ ಚೀಲದಲ್ಲಿ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಲಾಗಿತ್ತು. ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ತಕ್ಷಣ ಆ್ಯಂಬುಲೆನ್ಸ್ ಕರೆಯಿಸಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದರು. ಮಕ್ಕಳ ತಜ್ಞ ಡಾ.ಪವನ್ ಪೂಜಾರಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಬಂಧಿತ ಆರೋಪಿ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮದುವೆ ಆಮಿಷವೊಡ್ಡಿ ದೈಹಿಕ ಸಂಬಂಧ ಬೆಳೆಸಿ ಹುಟ್ಟಿದ ಮಗುವನ್ನು ಯಾರಿಗೂ ಗೊತ್ತಾಗದಂತೆ ಪ್ಲಾಸ್ಟಿಕ್ ಚೀಲದಲ್ಲಿ ಮರಕ್ಕೆ ನೇತು ಹಾಕಿ ಹೋಗಿದ್ದರು.