ಮಠದಲ್ಲೇ ನೇಣು ಬಿಗಿದುಕೊಂಡು ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ | JANATA NEWS
ಬೆಳಗಾವಿ : ಬೆಳಗಾವಿಯ ಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮಿ ನೇಣಿಗೆ ಶರಣಾಗಿದ್ದಾರೆ.
ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ತಮ್ಮ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಘಟನೆ ನಡೆದಿದೆ.
ಸ್ವಾಮೀಜಿ ಬರೆದ ಮರಣ ಪತ್ರದಲ್ಲಿ, 'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ಹಡೆದ ತಾಯಿ ನನ್ನ ಕ್ಷಮಿಸು. ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರನ ಕಡೆಗೆ. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಬೇಕು' ಎಂದು ಸ್ವಾಮೀಜಿ ಬರೆದಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರು ಮಾತಾಡಿದ್ದ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋ ಸಂಭಾಷಣೆಯಲ್ಲಿ ಮುರುಘಾ ಶ್ರೀ ಪ್ರಕರಣದ ಬಗ್ಗೆ ಚರ್ಚೆ ನಡೆದಿತ್ತು. ರಾಜ್ಯದ ಹಲವು ಮಠಾಧೀಶರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಆಡಿಯೋದಲ್ಲಿ ಕೇಳಿಬಂದಿತ್ತು. ಮಾತ್ರವಲ್ಲ ಆತ್ಮಹತ್ಯೆಗೆ ಶರಣಾಗಿರುವ ಬಸವಸಿದ್ಧಲಿಂಗ ಶ್ರೀಗಳ ಹೆಸರೂ ಕೂಡ ಪ್ರಸ್ತಾಪ ಆಗಿತ್ತು.
ಇದರಿಂದ ಶ್ರೀಗಳು ಮನನೊಂದಿದ್ದರಂತೆ. ಹೀಗಾಗಿ, ಆಡಿಯೋದಲ್ಲಿ ಮಾತನಾಡಿದ್ದ ಮಹಿಳೆಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೈಲಹೊಂಗಲ ಡಿವೈಎಸ್ಪಿಗೆ ಎರಡು ದಿನಗಳ ಹಿಂದೆ ಸೋಮಪ್ಪ ಬಾಗೇವಾಡಿ ಎಂಬುವವರು ದೂರು ನೀಡಿದ್ದರು. ದೂರಿನಲ್ಲಿ ಲಿಂಗಾಯತ ಮಠಾಧೀಶರ ಬಗ್ಗೆ ಸುಳ್ಳು ಆಡಿಯೋ ವೈರಲ್ ಮಾಡಲಾಗ್ತಿದೆ. ಮಾತನಾಡಿದ್ದು ಯಾರು ಎಂಬುದರ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದ್ದರು.