ಭೀಕರ ರಸ್ತೆ ಅಪಘಾತ: ದೇವರ ದರ್ಶನ ಮುಗಿಸಿ ವಾಪಸಾಗುತ್ತಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ಹಲವು ಮಂದಿ ಗಾಯ | JANATA NEWS
ಕಾರವಾರ : ದೇವರ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ಕಾರೊಂದು ಭೀಕರ ಅಪಘಾತಗೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಗೋವಾದ ರಾಷ್ಟ್ರೀಯ ಹೆದ್ದಾರಿ 66ರ ಕಾಣಕೋಣದ ತಾರಿ ಬಳಿ ನಡೆದಿದೆ.
ಹರೀಶ್ ಉಲ್ಲಾಸ ನಾಗೇಕರ್ (35), ಉಲ್ಲಾಸ ರಾಮ ನಾಗೇಕರ್ (60) ವೀಣಾ ಉಲ್ಲಾಸ ನಾಗೇಕರ್ (60) ಮೃತ ದುರ್ದೈವಿಗಳು. ಮೃತರು ಕಾರವಾರ ತಾಲೂಕಿನ ಮಾಜಾಳಿ ಮೂಲದವರಾಗಿದ್ದು, ಉಲ್ಲಾಸ್ ನಾಗೇಕರ್ ಕುಟುಂಬ ಸದ್ಯ ವಾಸ್ಕೋ ನಿವಾಸಿಗಳಾಗಿದ್ದಾರೆ.
ದುರ್ಘಟನೆಯಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿವೆ. ವಾಸ್ಕೋದಿಂದ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿ ದರ್ಶನ ಪಡೆದು ಬಳಿಕ ವಾಸ್ಕೋಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಗೋವಾದ ಕಾಣಕೋಣದ ಮನೋಹರ್ ಪರಿಕ್ಕರ್ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ನಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಮಡ್ಗಾಂವ್ನಿಂದ ಅತಿವೇಗದಲ್ಲಿ ಬಂದ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಬಲ ಭಾಗದಲ್ಲಿ ಬರುತ್ತಿದ್ದ ಉಲ್ಲಾಸ್ ಅವರ ಕುಟುಂಬವಿದ್ದ ಕಾರಿಗೆ ಎದುರಿನಿಂದ ಗುದ್ದಿದೆ. ಅಲ್ಲದೇ, ಅಲ್ಲೇ ಚಲಿಸುತ್ತಿದ್ದ ಸ್ಕೂಟರ್ವೊಂದಕ್ಕೂ ಡಿಕ್ಕಿಯಾಗಿದೆ.
ಈ ಭೀಕರ ಅಪಘಾತದಲ್ಲಿ ಉಲ್ಲಾಸ ನಾಗೇಕರ್, ಅವರ ಪತ್ನಿ ವೀಣಾ ನಾಗೇಕರ್ ಹಾಗೂ ಅವರ ಪುತ್ರ ಹರೀಶ್ ನಾಗೇಕರ್ ಮೃತಪಟ್ಟಿದ್ದು, ಉಳಿದ ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಣಕೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿದೆ.