ನಾಳೆ ಸದನದಲ್ಲೇ ಸಚಿವರೊಬ್ಬರ ಭ್ರಷ್ಟಾಚಾರ ದಾಖಲೆ ಸಮೇತ ಬಯಲು ಮಾಡುವೆ | JANATA NEWS
ಕಲಬುರಗಿ : ರಾಜ್ಯದ ಸಚಿವರೊಬ್ಬರ ಹಗರಣದ ಭ್ರಷ್ಟಾಚಾರವನ್ನು ನಾಳೆ ವಿಧಾನಸಭೆ ಅಧಿವೇಶನದಲ್ಲಿ ದಾಖಲೆಗಳ ಸಮೇತ ಬಿಡುಗಡೆಗೊಳಿಸಿ ಬಯಲಿಗೆಳೆಯಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಶೇ. 40 ಭ್ರಷ್ಟಾಚಾರ ಈಗಾಗಲೇ ಸಾರ್ವಜನಿಕರಿಗೆ ಅನುಭವವಾಗಿದೆ. ಈಗ ಬಿಡುಗಡೆ ಮಾಡುವ ದಾಖಲೆಗಳು ಸಚಿವರೊಬ್ಬರ ಕರ್ಮಕಾಂಡವಾಗಿದೆ. ನಾಳಿನ ಸದನದಲ್ಲಿ ಇದಕ್ಕೆ ಸರ್ಕಾರ ಉತ್ತರ ನೀಡಲಿ. ನನ್ನನ್ನು ಕೆಣಕಿದವರಿಗೆ ಇದೊಂದು ಎಚ್ಚರಿಕೆ ಎಂದು ಗುಡುಗಿದರು.
ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ, ಹಿಟ್ ಆಯಂಡ್ ರನ್ ಅಲ್ಲ. ನನ್ನ ಬಗ್ಗೆ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿರುವ ಆ ಸಚಿವರಿಗೆ ಇದು ನಮ್ಮ ಸ್ಯಾಂಪಲ್. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದರು.
ರೈತರ ಸಬ್ಸಿಡಿ ಹಣದಲ್ಲೂ ಪೆರ್ಸಂಟೇಜ್ ಪಡೆದಿರುವುದು ಹಾಗೂ ಸಚಿವರೊಬ್ಬರು ಸದನದಲ್ಲೇ ಅಧಿಕಾರಿ ತಮ್ಮ ಮಾತು ಕೇಳುತ್ತಿಲ್ಲ ಎನ್ನುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದರು.
ಅಧಿಕಾರ ದುರುಪಯೋಗ ಮಾಡಿಕೊಂಡು ಮಾಡಿರುವ ಅಕ್ರಮವನ್ನು ದಾಖಲೆ ಸಮೇತ ಬಯಲಿಗೆ ಎಳೆಯುವೆ ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದರು.