ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ | JANATA NEWS
ಚಿಕ್ಕಮಗಳೂರು : ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಮೊದಲ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ನೋವಿನಲ್ಲೂ ಪಾಲಕರು ಮಗಳ ಅಂಗಾಂಗ ದಾನ ಮಾಡಿದ್ದು, ಸಾವಿನಲ್ಲೂ ಯುವತಿ ಸಾರ್ಥಕತೆ ಮೆರೆದಿದ್ದಾರೆ.
ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದ ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರಿ ಎಸ್.ಎಚ್. ರಕ್ಷಿತಾಬಾಯಿ(17) ಸಾವಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಚಿಕ್ಕಮಗಳೂರಿನ ಬಸವನಹಳ್ಳಿಯ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು ಹಾಸ್ಟೆಲ್ನಲ್ಲಿದ್ದು ಇರುತ್ತಿದ್ದಳು.
ಎಂದಿನಂತೆ ಸೆ.18ರಂದು ಚಿಕ್ಕಮಗಳೂರಿನ ಸಂಬಂಧಿಕರ ಮನೆಗೆ ಬಸ್ಸಿನಲ್ಲಿ ಹೊರಟಿದ್ದಳು. ಮಾರ್ಗಮಧ್ಯೆ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಬಸ್ನಿಂದ ಆಯತಪ್ಪಿ ಬಿದ್ದ ರಕ್ಷಿತಾಬಾಯಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಿದುಳು ನಿಷ್ಕ್ರಿಯಗೊಂಡಿದೆ, ಈ ಸುದ್ದಿ ಕೇಳಿ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ನೋವಿನಲ್ಲೂ ಪಾಲಕರು, ವೈದ್ಯರ ಸಲಹೆ ಮೇರೆಗೆ ಮಗಳ ಕಣ್ಣು, ಹೃದಯ, ಕಿಡ್ನಿ, ಶ್ವಾಸಕೋಶ, ಲಿವರ್ ದಾನ ಮಾಡಲು ಒಪ್ಪಿಗೆ ಸೂಚಿಸಿದರು.
ಪೋಷಕರ ಒಪ್ಪಿಗೆಯಂತೆ ವೈದ್ಯರು ರಕ್ಷಿತಾಳ ಬಹು ಅಂಗಾಂಗ ದಾನಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಿದ್ದು, ವಿಶೇಷ ವೈದ್ಯರ ತಂಡವು ಜಿಲ್ಲಾಸ್ಪತ್ರೆಗೆ ಬಂದಿದ್ದು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ಅದರಂತೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಹೃದಯ ಕಸಿ ಮಾಡುವ ಉದ್ದೇಶದಿಂದ ರಕ್ಷಿತಾಳ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ರವಾನಿಸಲಾಯಿತು.