ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಕಿಂಗ್ ಪಿನ್ ದಿವ್ಯಾ ಅವರ ಪತಿ ರಾಜೇಶ್ ಗೆ ಜಾಮೀನು ಮಂಜೂರು | JANATA NEWS
ಬೆಂಗಳೂರು : ಪೊಲೀಸ್ ಸಬ್ ಇನ್ಸ್ಟೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಅವರ ಪತಿ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್ ಹಾಗರಗಿಗೆ ಅವರಿಗೆ ಕರ್ನಾಟಕ ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಳೆದ ಆರು ತಿಂಗಳಿಂದ ಜೈಲಿನಲ್ಲಿದ್ದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿಗೆ ಕಡೆಗೂ ಜಾಮೀನು ಸಿಕ್ಕಿದೆ. ರಾಜೇಶ್ ಹಾಗರಗಿ, ಕಲ್ಬುರ್ಗಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದಾರೆ.
ಅಲ್ಲದೇ ಪ್ರಕರಣದ ಪ್ರಮುಖ ಕಿಂಗ್ ಪಿನ್ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಯವರ ಪತಿ. ಇವರ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲಾ ಪರೀಕ್ಷೆ ಕೇಂದ್ರದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಹಾಗಾಗಿ ಈ ಪರೀಕ್ಷಾ ಕೇಂದ್ರದ ಕಾರ್ಯದರ್ಶಿ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಅಧ್ಯಕ್ಷ ರಾಜೇಶ್ ಹಾಗರಿಗಿ, ಪರೀಕ್ಷಾ ಮೇಲ್ವಿಚಾರಕರಾಗಿದ್ದ ಶಾಲಾ ಶಿಕ್ಷಕರು ಸೇರಿದಂತೆ ಹಲವರನ್ನು ಸಿಐಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಕಳೆದ ಏಪ್ರೀಲ್ 18 ರಂದು ಬಂಧನಕ್ಕೊಳಗಾಗಿದ್ದ ರಾಜೇಶ ಹಾಗರಗಿಗೆ ಐದುವರೆ ತಿಂಗಳ ನಂತರ ಇಂದು ಜಾಮೀನು ದೊರೆತಿದೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ರಾಜೇಶ ಹಾಗರಗಿ, ದಿವ್ಯಾ ಹಾಗರಗಿ ಸೇರಿದಂತೆ ಆರೋಪಿಗಳೆಲ್ಲಾ ಕಲಬುರಗಿ ಜಿಲ್ಲಾ ಕೋರ್ಟನಲ್ಲಿ ಹಲವು ಬಾರಿ ಸಲ್ಲಿಸಿದ್ದ ಜಾಮೀನು ತಿರಸ್ಕಾರಗೊಂಡಿದ್ದವು.
ಜಾಮೀನು ಕೋರಿ ರಾಜೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ಅವರ ನೇತೃತ್ವದ ಏಕಸದಸ್ಯ ಪೀಠ, ಹಗರಣದ ಪ್ರಮುಖ ಆರೋಪಿಯ ಪತಿ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗದು ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ಪುರಸ್ಕರಿಸಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ಯಾವುದೇ ಗಂಭೀರವಾದ ಆರೋಪಗಳಿರುವ ಸಂಬಂಧ ಸಾಕ್ಷ್ಯಾಧಾರಗಳು ಇಲ್ಲ. ಪ್ರಮುಖ ಆರೋಪಿಯ ಪತಿ ಎಂಬ ಕಾರಣ ನೀಡಿ ಅರ್ಜಿದಾರರು ಜಾಮೀನಿಗೆ ಅರ್ಹ ಅಲ್ಲ ಎಂದು ಹೇಳಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಸಾಕ್ಷ್ಯ ನಾಶಕ್ಕೆ ಮುಂದಾಗಬಾರದು. ಅನುಮತಿ ಇಲ್ಲದೇ ಠಾಣೆ ವ್ಯಾಪ್ತಿ ಬಿಟ್ಟು ಹೊರಕ್ಕೆ ಹೋಗಬಾರದು ಎಂದು ನ್ಯಾಯಪಪೀಠ ಆರೋಪಿಗೆ ಷರತ್ತುಗಳನ್ನು ವಿಧಿಸಿದೆ