ಬ್ಯಾನ್ ಮಾಡಿದ ತಕ್ಷಣ ಸಮಾಜಘಾತಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು: ಎಚ್ಡಿಕೆ | JANATA NEWS
ರಾಮನಗರ : ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಸರ್ಕಾರ ಇಂದು(ಸೆ.28) ಆದೇಶ ಹೊರಡಿಸಿದೆ.
ದೇಶಾದ್ಯಂತ ಪಿಎಫ್ಐ ಸಂಘಟನೆ ಬ್ಯಾನ್ ಮಾಡಲಾಗಿದೆ ಈ ಬಗ್ಗೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ , ಪಿಎಫ್ಐ ಬ್ಯಾನ್ ಮಾಡೋದ್ರಿಂದ ಸಮಾಜಘಾತಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು ಎಂದು ಕಿಡಿ ಕಾರಿದ್ದಾರೆ. ಯಾವ ಯಾವ ಸಂಘಟನೆಗಳಿಂದ ದೇಶದ್ರೋಹದ ಕೆಲಸ ಆಗಿದೆ ಎಂಬುದನ್ನ ಜನರ ಮುಂದೆ ತೆರೆದಿಡಬೇಕು. ಇದು ಸರ್ಕಾರದ ಕರ್ತವ್ಯ ಎಂದರು.
ಯಾರೇ ತಪ್ಪು ಮಾಡಿದ್ರೂ ಉಗ್ರವಾದ ಕ್ರಮ ಕೈಗೊಳ್ಳಬೇಕು. ಸಂಘಟನೆಗಳನ್ನು 5 ವರ್ಷ ಬ್ಯಾನ್ ಮಾಡಿದ್ದೇವೆ ಎನ್ನಬಹುದು. ಸಮಾಜಘಾತಕ ಶಕ್ತಿಗಳ ಹಿನ್ನೆಲೆ ಏನಿದೆ. ಕಾನೂನು ಬಾಹಿರ ಚಟುವಟಿಕೆ ಜನರ ಮುಂದಿಡಬೇಕು. ಸರ್ಕಾರ ಹೀಗೆ ಮಾಡದಿದ್ರೆ ಜನರಿಗೆ ಅಪನಂಬಿಕೆ ಬರುತ್ತೆ ಎಂದು ಕಿಡಿಕಾರಿದ್ದಾರೆ
ಸಮಾಜ ದ್ರೋಹಿ, ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಯಾವುದೇ ಸಂಘಟನೆ ಪಾಲ್ಗೊಂಡಿದ್ದರೂ ಅದನ್ನು ಬ್ಯಾನ್ ಮಾಡಬೇಕೆಂದು ಹೇಳಿದ ಕುಮಾರಸ್ವಾಮಿ, ಈಗಾಗಲೇ ಬಂಧನಕ್ಕೊಳಗಾಗಿರುವ ಪಿಎಫ್ಐ ಕಾರ್ಯಕರ್ತರು ನಡೆಸಿರುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಜನರ ಮುಂದಿಟ್ಟರೆ ಅವರ ಪರ ಸಹಾನುಭೂತಿ ಇಟ್ಟುಕೊಂಡು ಪ್ರತಿಭಟನೆ ನಡೆಸಲು ಶುರುಮಾಡಿರುವ ಜನರಿಗೆ ವಾಸ್ತವತೆ ಮನದಟ್ಟಾಗುತ್ತದೆ ಎಂದರು.