ಟಿಪ್ಪು ಹೆಸರು ತೆಗೆದು, ಒಡೆಯರ್ ಹೆಸರು ರೈಲಿಗೆ ಇಟ್ಟಿದ್ದಕ್ಕೆ ಆಕ್ಷೇಪ: ಹೆಚ್.ಡಿ. ರೇವಣ್ಣ | JANATA NEWS
ಹಾಸನ : ರೈಲಿಗೆ ಇಟ್ಟಿದ್ದ ಟಿಪ್ಪು ಹೆಸರನ್ನು ಏಕೆ ತೆಗೆಯಬೇಕಿತ್ತು, ಟಿಪ್ಪು ಕೂಡ ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಬೇರೆ ರೈಲುಗಳಿಗೆ ಒಡೆಯರ್ ಹೆಸರಿಡಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ದುಡ್ಡು ಹೊಡೆಯೋದು, ಸಮಾಜವನ್ನು ಗುರಿಯಾಗಿಟ್ಟು ಕೆಲಸ ಮಾಡೋದನ್ನು ಮಾಡುತ್ತಿದೆ. ಇಷ್ಟು ವರ್ಷ ಟಿಪ್ಪು ಹೆಸರನ್ನು ರೈಲಿಗೆ ಇಡಲಾಗಿತ್ತು. ಯಾರಾದ್ರೂ ಆಕ್ಷೇಪ ವ್ಯಕ್ತ ಪಡಿಸಿದ್ದರಾ.? ಇದು ಕೇವಲ ಚುನಾವಣೆ ಗಿಮಿಕ್ಸ್ ಎಂದು ಕಿಡಿಕಾರಿದರು.
ಒಡೆಯರ ಹೆಸರು ಇಡಲಿ ನಾವು ಬೇಡ ಅನ್ನುವುದಿಲ್ಲ. ಆದ್ರೇ ಯಾರೋ ಈ ಹಿಂದೆ ಪುಣ್ಯಾತ್ಮರು ಟಿಪ್ಪು ಹೆಸರು ಇಟ್ಟಿದ್ದರು, ಆ ಹೆಸರು ಹಾಗೇ ಬಿಟ್ಟು, ಮೈಸೂರಿಗೆ ಎಷ್ಟೊಂದು ರೈಲು ಓಡಾಡುತ್ತವೆ. ಆ ಯಾವುದಾದರೂ ರೈಲಿಗೆ ಒಡೆಯರ್ ಹೆಸರು ಇಡಬಹುದಾಗಿತ್ತು ಎಂದು ಹೇಳಿದರು.
ಮೂರು ವರ್ಷದ ಹಿಂದೆನೇ ಒಡೆಯರ್ ಹೆಸರು ಇಡಬೇಕಿತ್ತು, ಏನು ಮಾಡುತ್ತಿದ್ದರು. ಈಗ ಕುವೆಂಪು, ಒಡೆಯರ್, ಎಸ್ಸಿ, ಎಸ್ಟಿ ಸಮಾಜ ನೆನಪಾಗಿದೆ. ದೇವೇಗೌಡರು ಒಳಮೀಸಲಾತಿ ಕೊಡಬೇಕೆಂದು ಎಷ್ಟು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಗೆ ಸಾಬ್ರು ಓಟು ಹಾಕಲ್ಲ ಎಂದು ಗುರಿಯಾಗಿಟ್ಟು ಕೊಂಡಿದ್ದಾರೆ.
ವೋಟಿಗೋಸ್ಕರ ಈ ಕೆಳಮಟ್ಟದ, ದ್ವೇಷದ ರಾಜಕಾರಣ ಮಾಡಬಾರದು. ಇಂತಹ ಭ್ರಷ್ಟ ಸರ್ಕಾರವನ್ನು ನಾನು ಐವತ್ತು ವರ್ಷದಲ್ಲಿ ನೋಡಿರಲಿಲ್ಲ. ಯಾವ ಮುಖ ಇಟ್ಟುಕೊಂಡು ವೋಟು ಕೇಳುತ್ತಾರೆ, ಯಾವ ನೈತಿಕತೆ ಇವರಿಗಿದೆ, ರಾಜ್ಯ, ಜಿಲ್ಲೆಗಳಲ್ಲಿ ಬಿಜೆಪಿಯವರು ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.