ತೆರವು ಕಾರ್ಯ ವಿರೋಧ, ಪೆಟ್ರೋಲ್ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ ದಂಪತಿ | JANATA NEWS
ಬೆಂಗಳೂರು : ಅಕ್ರಮ ಒತ್ತುವರಿ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರದಿಂದ ಬಿಬಿಎಂಪಿ ಪುನರಾರಂಭಿಸಿದ್ದು ಇಂದು ಬೆಳಗ್ಗೆ ಕೆ ಆರ್ ಪುರಂನಲ್ಲಿ ಕಾರ್ಯಾಚರಣೆಗಿಳಿದಿತ್ತು.
ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಮನೆ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ ಘಟನೆ ಬಸವನಪುರ ಮುಖ್ಯರಸ್ತೆಯ ಎಸ್.ಆರ್.ಲೇಔಟ್ನಲ್ಲಿ ನಡೆದಿದೆ.
ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ದಂಪತಿ ಕ್ಯಾನ್ನಲ್ಲಿ, ಬಾಟಲಿಯಲ್ಲಿ ಪೆಟ್ರೋಲ್ ಹಿಡಿದು ಒತ್ತುವರಿ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಇಲ್ಲಿಯವರೇ, ಇಲ್ಲಿ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು ?. ನಾವೇನು ಪಾಕಿಸ್ತಾನದಿಂದ ಬಂದವರಾ?, ನಾವೂ ಕರ್ನಾಟಕದ ಜನರೇ. ನಮಗೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಇಷ್ಟೊಂದು ತೊಂದರೆ ಕೊಡ್ತಿದ್ದಾರೆ ಎಂದು ದಂಪತಿ ಪ್ರಶ್ನಿಸಿದ್ದಾರೆ.
ಕಷ್ಟಪಟ್ಟು ಮನೆ ಕಟ್ಟಿದ್ದೇವೆ. ಮನೆ ಕಟ್ಟಲು ಸಾಲ ಮಾಡಿದ್ದೆ. ಈಗ ಮನೆ ಒಡೆದು ಹಾಕಿದ್ರೆ ಹೇಗೆ? ನಿನ್ನೆ ಎಲ್ಲಾ ಕಾಂಪೌಂಡ್ ಒಡೆದಿದ್ದಾರೆ. ಇದಕ್ಕೆಲ್ಲಾ ನಮಗೆ ಪರಿಹಾರ ಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಬರಬೇಕು. ಸಿಎಂ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು.
ನಾವು ಒಂದೊಮ್ಮೆ ಬೆಂಕಿ ಹಚ್ಚಿಕೊಂಡರೆ ಅದಕ್ಕೆ ಪೊಲೀಸರೇ ಕಾರಣ ಎಂದು ದಂಪತಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿ ಸೋನಾ ಸೇನ್ ಪೇಟ್ರೋಲ್ ಸುರಿದುಕೊಂಡಿದ್ದಾಳೆ. ಆಕೆಗೆ ಪತಿ ಸುನೀಲ್ ಸಿಂಗ್ ಬೆಂಕಿ ಹಚ್ಚಲು ಹೋಗಿದ್ದಾರೆ. ಆಗ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ದಂಪತಿ ಮೈಗೆ ನೀರು ಹರಿಸಿ ದಂಪತಿಯನ್ನು ಬಲವಂತವಾಗಿ ಎಳೆದು ಮನೆಯೊಳಗೆ ಕರೆದುಕೊಂಡು ಹೋದ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಪಾಲಿಕೆ ಸಿಬ್ಬಂದಿ ಅವರ ಮನೆಯನ್ನು ಬುಲ್ಡೋಜರ್ ನಿಂದ ಕೆಡವಿ ಬೀಳಿಸಿದರು.
ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಮಾತನಾಡಿ, ನಿನ್ನೆಯಿಂದಲೂ ದಂಪತಿ ಇದೇ ರೀತಿ ಮಾಡ್ತಿದ್ದಾರೆ. ಕಾನೂನಿನಲ್ಲಿ ಸೆಂಟಿಮೆಂಟ್ಗೆ ಅವಕಾಶ ಇಲ್ಲ. ಮಳೆ ಬಂದು ಇಲ್ಲಿ ಮಗು ಕೂಡ ಕೊಚ್ಚಿಹೋಗಿತ್ತು. ಹೀಗಾಗಿ ರಾಜಕಾಲುವೆ ಮಾಡಲೇಬೇಕು. ಅವರು ಈ ರೀತಿ ಮಾಡ್ಬಾರ್ದು, ಅವರ ಮನೆ ಬಿಡೋಕೆ ಸಾಧ್ಯವಿಲ್ಲ. ಒಂದು ಮನೆ ಬಿಟ್ರೆ ಬೇರೆಯವ್ರು ಸುಮ್ಮನಿರ್ತಾರಾ?. ಸದ್ಯಕ್ಕೆ ಅವ್ರನ್ನ ಅಲ್ಲಿಂದ ಕರೆತರಲು ಪ್ರಯತ್ನ ಮಾಡ್ತಿದ್ದೀವಿ, ಬಳಿಕ ಕಾರ್ಯಾಚರಣೆ ಮಾಡುತ್ತೀವಿ ಎಂದು ಹೇಳಿದರು.
ಈ ದಂಪತಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡದಿಂದ 2 ಮೀಟರ್ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿದೆ ಎಂದು ಗುರುತಿಸಿರುವ ಸ್ಥಳದಲ್ಲಿಯೇ ಕಟ್ಟಡದ ಕಂಬವೂ ಇರುವ ಕಾರಣ, ಒತ್ತುವರಿ ತೆರವು ವೇಳೆ ಇಡೀ ಕಟ್ಟಡ ಉರುಳುವ ಭೀತಿಯಿದೆ.