ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ದೂರು | JANATA NEWS

ಬೆಂಗಳೂರು : ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಿ ಪ್ರಭಾವಿ ಬಿಲ್ಡರ್ಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್, ಸಿದ್ದರಾಮಯ್ಯ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಎನ್.ಆರ್.ರಮೇಶ್ ಅವರು, ಸಿದ್ದರಾಮಯ್ಯ ಅವರು ತಾವು ಅಧಿಕಾರದಲ್ಲಿದ್ದಾಗ ಕಾನೂನನ್ನು ಉಲ್ಲಂಘಿಸಿದ್ದಾರೆ. 200 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಡಿನೊಟಿಫೈ ಮಾಡುವ ಮೂಲಕ ಪ್ರಭಾವಿ ಬಿಲ್ಡರ್ಗಳಿಗೆ ನೆರವಾಗಿದ್ದಾರೆ ಎಂದು ಅವರು ಆಪಾದಿಸಿದರು.
ಪ್ರಭಾವಿ ಬಿಲ್ಡರ್ ಒಬ್ಬರ ಹಣದ ಪ್ರಭಾವಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಸರ್ಕಾರಿ ಸ್ವತ್ತನ್ನು Re-Do ಎಂಬ ಹೆಸರಿನಲ್ಲಿ ಸಿದ್ದರಾಮಯ್ಯ ಡಿನೊಟಿಫಿಕೇಷನ್ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ದಕ್ಷಿಣ ತಾಲೂಕು, ಕಸಬಾ ಹೋಬಳಿಯ ಲಾಲ್ ಬಾಗ್ ಸಿದ್ಧಾಪುರ ಗ್ರಾಮದ (ಈಗಿನ ಜಯನಗರ 1ನೇ ಬ್ಲಾಕ್) ಸರ್ವೆ ನಂಬರ್ - 27/1, 28/4, 28/5 ಮತ್ತು 28/6 ರ 02 ಎಕರೆ 39 ½ ಗುಂಟೆಯಷ್ಟು ವಿಸ್ತೀರ್ಣದ ಸುಮಾರು 200 ಕೋಟಿ ರೂ. ಗಳಿಗೂ. ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು ಬಿಡಿಎ ಮಾಸ್ಟರ್ ಪ್ಲ್ಯಾನ್ ನಂತೆ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗವೆಂದು ಮೀಸಲಿಟ್ಟಿದ್ದರೂ ಬಿಲ್ಡರ್ ಆಗಿರುವ ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ ಒಬ್ಬರು ಕಾನೂನುಬಾಹಿರವಾಗಿ ಕ್ರಯಕ್ಕೆ ಪಡೆದಿದ್ದಾರೆ.
ನಂತರ ಈ ಸ್ವತ್ತುಗಳಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಬಳಕೆಗೆ ಪರಿವರ್ತಿಸಿಕೊಡಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರದ ಸಮಿತಿಗೆ ಅಶೋಕ್ ಧಾರಿವಾಲ್ ಅವರು ಸಲ್ಲಿಸಿದ್ದರು. ನಿಯಮನುಸಾರ ಈ ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯುವುದು ಕಾನೂನು ಬಾಹಿರವಾಗಿರಲಿದೆ.
ಹೀಗಿದ್ದರೂ ಸಹ, ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿದ್ಧಾಪುರ ಬಡಾವಣೆಯ ಕನಿಷ್ಠ 200 ಕೋಟಿ ರೂಪಾಯಿ ಹೆಚ್ಚು ಮೌಲ್ಯದ ಸಾರ್ವಜನಿಕ ಬಳಕೆಯ ಉದ್ಯಾನವನಕ್ಕೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೀಸಲಿಟ್ಟಿದ್ದ ಸ್ವತ್ತನ್ನು ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ನ ಪ್ರಭಾವಕ್ಕೆ ಮಣಿದು ಡಿನೋಟಿಫಿಕೇಷನ್ ಮಾಡಿಕೊಟ್ಟಿದ್ದಾರೆ.
ಈ ರೀತಿ ಕಾನೂನುಗಳನ್ನು ಉಲ್ಲಂಘನೆ ಮಾಡಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಲು ಸಹಕರಿಸಿದ್ದ ಅಂದಿನ ಬಿಡಿಎ ಆಯುಕ್ತ ಶ್ಯಾಂ ಭಟ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿ ಅವರ ವಿರುದ್ಧವೂ ದೂರು ನೀಡಲಾಗಿದೆ. ಈ ಪ್ರಕರಣವನ್ನು ಕೂಡಲೇ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್ ಅವರು ಒತ್ತಾಯಿಸಿದ್ದಾರೆ.