ದೈವ ನರ್ತಕರಿಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧಾರ | JANATA NEWS
ಬೆಂಗಳೂರು : ಕರಾವಳಿ ಭಾಗದ ದೈವ, ಭೂತಾರಾಧನೆ ಬಗ್ಗೆ ಕಥೆ ಹೊಂದಿರುವ ಕಾಂತಾರ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಮಧ್ಯೆ ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವರಿಗೆ ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಶುಭಸುದ್ದಿ ನೀಡಿದೆ.
ಹೌದು, ಇದೀಗ 60 ವರ್ಷ ಮೇಲ್ಪಟ್ಟ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ತಿಂಗಳು ಮಾಸಾಶನ ನೀಡಲು ನಿರ್ಧರಿಸಲಾಗಿದೆ.
ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ರೂ. 2000/-ವನ್ನು ಪ್ರತಿ ತಿಂಗಳು ಮಾಸಾಶನದ ರೂಪದಲ್ಲಿ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಕಾರ್ಕಳ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬಕ್ಕೆ ಸರ್ಕಾರ ಈಗ ಆಶಾದಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಸರ್ಕಾರ ದೈವಕ್ಕೆ ಕಟ್ಟುವ ಅಂದರೆ ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ. ಪಂಬದರು, ನಲಿಕೆಯವರು, ಪರವರಿಗೆ ಅಂದರೆ ಇವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುತ್ತಾರೆ. ಇವರ ಅಭಿವೃದ್ಧಿಗಾಗಿ ಈ ಕ್ರಮವನ್ನು ತರಲಾಗಿದೆ. ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ.