ಸರ್ಕಾರಿ ಶಾಲಾ-ಕಾಲೇಜುಗಳಿಗೆ ಪ್ರಹ್ಲಾದ್ ಜೋಶಿ ಬಂಪರ್ ಗಿಫ್ಟ್, 1177 ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ | JANATA NEWS
ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದೀಪಾವಳಿ ಬಂಪರ್ ಗಿಫ್ಟ್ ನೀಡಿದ್ದಾರೆ. 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ವುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಘೋಷಿಸಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಹೊಸ ಕಾರ್ಯಕ್ರಮಗಳ ಮೂಲಕ ನಮಗೆ ಪ್ರೇರಣೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಲು ಬಣ್ಣದರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಾಳೆ ಕುಂದಗೋಳದ ಹರಭಟ ಶಾಲೆ ಮೈದಾನದಲ್ಲಿ ಚಾಲನೆ ನೀಡಲಾಗುತ್ತದೆ ಎಂದರು.
ಸರ್ಕಾರಿ ಶಾಲಾ, ಕಾಲೇಜುಗಳಿಗೆ ಬಣ್ಣದರ್ಪಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಕೆಲವರು ಶಾಲೆ ಹಾಳಾಗಿದೆ, ಕೆಲವರು ಶಾಲೆ ಕೆಟ್ಟಿದೆ, ಶಾಲೆ ಗಲೀಜಾಗಿದೆ ಎಂದೆಲ್ಲಾ ಬರುತ್ತಿದ್ದಾರೆ. ಎಲ್ಲವನ್ನೂ ನೋಡಿದ ಬಳಿಕ ಇಂತಹ ಶಾಲೆಗಳಿಗೆ ಹೊಸ ಸ್ವರೂಪ ನೀಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ.
ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣವನ್ನ ನೀಡಲಾಗುವುದು. ಕ್ಲಾಸ್ ರೂಮ್ ಗಳಿಗೆ ಬಣ್ಣ ಹಚ್ಚಲು 20 ಲೀಟರ್ ಪೇಂಟ್ ಅನ್ನ ಉಚಿತವಾಗಿ ನೀಡಲಾಗುವುದು ಎಂದು ಜೋಶಿ ಹೇಳಿದರು. ಶಾಲೆಯ ಹೊರ ಗೋಡೆಗಳಿಗೂ ಪ್ರತ್ಯೇಕವಾಗಿ ಬಣ್ಣ ವಿತರಿಸಲಾಗುವುದು. ಶಾಲೆಗಳಿಗೆ ಬಣ್ಣ ಹಚ್ಚಲು ಶ್ರಮದಾನದ ಕಾರ್ಯಕ್ಕೆ ವಿದ್ಯಾರ್ಥಿ ಸಂಘಟನೆಗಳು, ಸೇವಾ ಸಂಘಸಂಸ್ಥೆಗಳು, ಶಿಕ್ಷಕರು ಮುಂದೆ ಬರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. 20 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಶಾಲೆಗೆ ಬಣ್ಣ ಹಚ್ಚುವ ಒಪ್ಪಂದದೊಂದಿಗೆ ಸಂಘ ಸಂಸ್ಥೆಗಳು ಉಚಿತವಾಗಿ ಬಣ್ಣ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ ಭಾಗೀಧಾರಿ ಆಂದೋಲನಗಳನ್ನು ದೇಶಕ್ಕೆ ಪರಿಚಯಿಸಿದರು.ಸ್ವಚ್ಛ ಭಾರತ ಇರಬಹುದು, ಗಂಗಾ ಕಲ್ಯಾಣ ಯೋಜನೆಗಳಿಗೆ ಜನರಿಂದ ಬಹಳ ಅದ್ಭುತವಾದ ಪ್ರತಿಕ್ರಿಯೆ ದೊರಕಿತು. ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ರೀತಿಯ ಅಭಿಯಾನ ಮಾಡಲು ಮುಂದಾಗಿದ್ದೇವೆ. ಇದೇನು ವೋಟು ಗಿಟ್ಟಿಸುವ ಕಾರ್ಯಕ್ರಮವಲ್ಲ. ಇದರಲ್ಲಿ ಸ್ವಚ್ಛತೆಯಿಂದ ಸೌಂದರ್ಯದೆಡೆಗೆ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಈ ಬಣ್ಣದರ್ಪಣೆ ಅಭಿಯಾನ ನಡೆಸಲು ಮುಂದಾಗಿದ್ದೇವೆ. ಈ ಕಾರ್ಯಕ್ರಮದಲ್ಲಿ ಒಟ್ಟು 1177 ಶಾಲೆ ಕಾಲೇಜುಗಳಿದ್ದು ಅದರಲ್ಲಿ 984 ಪ್ರಾಥಮಿಕ ಶಾಲೆಗಳು,139 ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸಂಖ್ಯೆ 54 ಇದೆ ಎಂದು ಮಾಹಿತಿ ನೀಡಿದರು.