ಕನ್ನಡ ನಾಡು, ಪುಣ್ಯದ ಬೀಡು, ಈ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯ ಮಾಡಿರಬೇಕು: ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಇಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಧ್ವಜಾರೋಹಣದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ, ಕನ್ನಡ ನಾಡು, ಪುಣ್ಯದ ಬೀಡು. ಈ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯ ಮಾಡಿರಬೇಕು. ಕನ್ನಡ ನಾಡು ನಿಸರ್ಗದತ್ತ ನಾಡು. ಇಲ್ಲಿ ಉತ್ತಮ ಮಳೆ, ನದಿ, ಬೆಳೆ ಎಲ್ಲವೂ ಇದೆ ಎಂದರು.
ಕನ್ನಡ ನೆಲ ವಿವಿಧ ನಾಡಿನಲ್ಲಿ ಹಂಚಿಹೋಗಿದ್ದು, ಸ್ವಾತಂತ್ರ್ಯ ನಂತರ ಜೋಡಿಸುವ ಕೆಲಸ ಮಾಡಲಾಯಿತು. ಮುಂಬೈ ಕರ್ನಾಟಕ, ನಿಜಾಮರ ಕರ್ನಾಟಕ, ಮದ್ರಾಸ್ ಪ್ರಾಂತ್ಯ ಎಲ್ಲವನ್ನೂ ಸೇರಿಸಿ ಒಂದು ರಾಜ್ಯ ಮಾಡಿ ಎನ್ನುವ ಏಕೀಕರಣದ ಹೋರಾಟ ನಡೆಯಿತು. ಹಾಲೂರು ವೆಂಕಟರಾಯರು, ನಿಜಲಿಂಗಪ್ಪ, ಸಾಹುಕಾರ್ ಚನ್ನಯ್ಯ ಹಲವಾರು ಪ್ರಮುಖರು ಇದಕ್ಕೆ ಧುಮಿಕಿದರು. ಇದಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಮುಖ್ಯ ಎಂದರು.
ಕನ್ನಡ ನಾಡು ಕಟ್ಟಲು ದುಡಿಯಲು ನನ್ನ ಶ್ರಮ ಏನು ಎಂದು ಪ್ರತಿಯೊಬ್ಬ ಕನ್ನಡಿಗ ಕೂಡ ಆತ್ಮವಲೋಕನ ಮಾಡಬೇಕು. ಇದನ್ನು ಯೋಚಿಸಿದ್ರೆ ವಿಶ್ವದಲ್ಲಿ ಕರ್ನಾಟಕ ಅತ್ಯಂತ ಶ್ರೇಷ್ಠವಾಗಲಿದೆ. ಇಲ್ಲಿ ಬುದ್ದಿವಂತರಿಗೆ ಕೊರತೆ ಇಲ್ಲ. ಅತ್ಯಂತ ಜ್ಞಾನಪೀಠ ಪ್ರಶಸ್ತಿ ಸಿಕ್ಕಿರೋದು ಈ ನಾಡಿನ ಹಿರಿಯರಿಗೆ. ಸುಂದರವಾದ ಬದುಕನ್ನು ಕಟ್ಟಿಕೊಟ್ಟು ಹೋಗಿದ್ದಾರೆ. ನಾವು ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ನಾಡಿನ ಜನತೆಗೆ ಕರೆ ಕೊಟ್ಟರು.
ನಾವೆಲ್ಲರೂ ಕನ್ನಡಿಗರು ಎಂದು ಹೇಳಬೇಕು. ಹೆಮ್ಮೆಯಿಂದ ಮುನ್ನುಗ್ಗಬೇಕು. ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ ಎಂಬುವುದು ನಮ್ಮ ಮಂತ್ರ ಆಗಬೇಕು ಎಂದರು. ಕರ್ನಾಟಕಕ್ಕಾಗಿ ಕಲಿಯುತ್ತೇವೆ. ಕರ್ನಾಟಕ್ಕಾಗಿ ದುಡಿಯುತ್ತೇವೆ ಕರ್ನಾಟಕಕ್ಕಾಗಿ ಬದುಕುತ್ತೇಲೆ ಎಂಬುವುದು ನಮ್ಮ ಸಂಕಲ್ಪ ಆಗಬೇಕು ಎಂದರು.