ಶಾಲಾ ಪಠ್ಯದಲ್ಲಿ ಪುನೀತ್ ರಾಜ್ ಕುಮಾರ್ ವಿಷಯ ಸೇರ್ಪಡೆಗೆ ಹಂತ ಹಂತವಾಗಿ ಕ್ರಮ | JANATA NEWS

ಬೆಂಗಳೂರು : ಕನ್ನಡ ರಾಜ್ಯೋತ್ಸವದಂದೇ ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕೆಂಬುದು ನಮ್ಮ ಇಚ್ಛೆ ಆಗಿತ್ತು. ಅದರಂತೆ ಇಂದೇ ಪ್ರಶಸ್ತಿ ಪ್ರದಾನಿಸುತ್ತಿದ್ದೇವೆ. ಅವರ ಕುರಿತ ವಿಷಯವನ್ನು ಪಠ್ಯದಲ್ಲಿ ಸೇರಿಸುವ ಕುರಿತು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ನಾಡಿನ ಜನತೆಗೆ ರಾಜ್ಯೋತ್ಸವದ ಶುಭಾಶಯ ಕೋರಿದರು. ಅತ್ಯಂತ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇದು ಕೇವಲ ಆಚರಣೆಯಾಗಿ ಉಳಿಯೋದಿಲ್ಲ, ಬದುಕಿನ ಪ್ರತೀ ಕ್ಷಣದಲ್ಲೂ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಶಿಕ್ಷಣ, ಉದ್ಯೋಗ, ಎಲ್ಲ ರಂಗಗಳಲ್ಲೂ ರಾಜ್ಯ ಮುಂದೆ ಬರಲು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಇಂದಿನ ಕರ್ನಾಟಕ ರಾಜ್ಯೋತ್ಸವದ ವಿಶೇಷವೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು. ನವೆಂಬರ್ 1 ರಂದು ಅವರಿಗೆ ಪ್ರಶಸ್ತಿ ಕೊಡಬೇಕೆಂಬುದು ನಮ್ಮ ಇಚ್ಛೆ ಆಗಿತ್ತು. ಅವರು, ಕನ್ನಡದ ನೆಲದಲ್ಲಿ ಹತ್ತು ಹಲವು ಪರೋಪಕಾರ ಕೆಲಸವನ್ನು ಮಾಡಿದಾರೆ.
ಎಷ್ಟರ ಮಟ್ಟಿಗೆ ಅಂದರೆ ತಮ್ಮ ಅಂಗಾಂಗಗಳ ದಾನ ಮಾಡಿ ಮಾದರಿಯಾಗಿದ್ದಾರೆ. ಅವರು ತೀರಿ ಹೋದ ಮೇಲೆ ಹಲವರು ಕಣ್ಣು ದಾನ ಮಾಡುತ್ತಿದ್ದಾರೆ. ಪುನೀತ್ ಸಣ್ಣ ವಯಸ್ಸಲ್ಲೇ ಪ್ರೇರಣಾದಾಯಕ ಸಾಧನೆ ಮಾಡಿದರು ಎಂದರು
ಶಾಲಾ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ಸಾಧನೆ, ಪ್ರೇರಣೆ ಕುರಿತ ಮಾಹಿತಿ ಸೇರಿಸಬೇಕು ಎನ್ನುವ ಮನವಿಗಳು ಬಂದಿವೆ. ಪಠ್ಯ ಸೇರ್ಪಡೆ ವಿಚಾರ ಸಂಬಂಧ ಹಂತಹಂತವಾಗಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ. ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದರು