ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ನಳಿನ್ಕುಮಾರ್ ಕಟೀಲ್ ಗುದ್ದಲಿ ಪೂಜೆ | JANATA NEWS
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿದ್ದ ಪ್ರವೀಣ್ ಕುಟುಂಬದ ಹಳೆಯ ಮನೆಯನ್ನು ಕೆಡವಿ, ಆ ಜಾಗದಲ್ಲಿ ಹೊಸ ಮನೆಗೆ ಭೂಮಿ ಪೂಜೆ ನಡೆದಿದೆ.
ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೂತನವಾದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು, ಬಿಜೆಪಿ ವತಿಯಿಂದ ಪ್ರವೀಣ್ ಕುಟುಂಬಕ್ಕೆ ಹೊಸ ಮನೆಯನ್ನು ಕಟ್ಟಿಸಿಕೊಡುವುದಾಗಿ ಸಂಸದ ನಳಿನ್ ಕುಮಾರ್ ಅವರು ಭರವಸೆ ನೀಡಿದ್ದರು.
ಪ್ರವೀಣ್ ಅವರ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ಈಗಿರುವ ಮನೆಯ ಸಮೀಪದಲ್ಲೇ ಹೊಸ ಮನೆಯನ್ನು ನಿರ್ಮಿಸುವುದು ಪ್ರವೀಣ್ ಅವರ ಕನಸಾಗಿತ್ತು. ಅದೇ ಜಾಗದಲ್ಲಿ ಮನೆ ನಿರ್ಮಾಣ ಆಗಬೇಕೆಂಬುದು ಕುಟುಂಬದವರ ಆಶಯವೂ ಆಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಗುದ್ದಲಿಪೂಜೆ ನಡೆಸುವ ಮೂಲಕ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 60 ಲಕ್ಷ ರೂಪಾಯಿ ವೆಚ್ಚದಲ್ಲಿ 2,700ಚದರ್ ಅಡಿ ಮನೆಯು ಪ್ರವೀಣ್ ನೆಟ್ಟಾರು ಸಮಾಧಿಯ ಪಕ್ಕದಲ್ಲಿ ಮೇ ತಿಂಗಳ ಅಂತ್ಯದೊಳಗೆ ನಿರ್ಮಾಣವಾಗಲಿದೆ.
ಈ ಸಮಾರಂಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.