ಶ್ರೀರಾಮುಲು ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ ಏನೆಂದು ಅರ್ಥೈಸಿಕೊಳ್ಳಿ | JANATA NEWS
ಬೆಂಗಳೂರು : ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಸಚಿವ ಶ್ರೀರಾಮುಲು ನದಿ ತೀರದಲ್ಲಿ ಮಲಗಿದ್ದಾರೆ ಎಂದರೆ ರಾಮ ರಾಜ್ಯದ ಪರಿಸ್ಥಿತಿ ಏನೆಂದು ಅರ್ಥೈಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಬಳ್ಳಾರಿ ತಾ. ಪಿಡಿ ಹಳ್ಳಿ ಬಳಿ ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆ ಪಿಲ್ಲರ್ ದುರಸ್ತಿ ಹಿನ್ನೆಲೆ ಕಾಲುವೆಗೆ ನೀರು ಹರಿಯೋದು ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಶ್ರೀರಾಮುಲು ಅವರು, ಕಾಮಗಾರಿ ಪೂರ್ಣ ಮುಗಿಯೋವರೆಗೂ ಅಲ್ಲೇ ವಾಸ್ತವ್ಯಕ್ಕೆ ನಿರ್ಧರಿಸಿ ಅಲ್ಲಿಯೇ ರಾತ್ರಿ ಕಳೆದಿದ್ದಾರೆ.
ಬಳ್ಳಾರಿ ನಗರವನ್ನು ಆಂಧ್ರಪ್ರದೇಶದೊಂದಿಗೆ ಬೆಸೆಯುವ ಮಹತ್ವದ ಸೇತುವೆಯಾದ, ಬಳ್ಳಾರಿ ಹೊರವಲಯದಲ್ಲಿರುವ ಪರಮದೇವನ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ವಿರೋಧಿಸಿದ್ದಾರೆ.
ಕಳೆದ 20 ದಿನಗಳಿಂದ ಸೇತುವೆಯ ಕಂಬ ನಿರ್ಮಾಣಕ್ಕಾಗಿ ಕಾಲುವೆ ನೀರು ನಿಲ್ಲಿಸಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಉದ್ದೇಶದಿಂದ ಸ್ಥಳದಲ್ಲಿಯೇ ಸಚಿವ ಶ್ರೀರಾಮುಲು ಬೀಡಾರ ಹೂಡಿದ್ದಾರೆ.