ನಾವು ನಮ್ಮ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು | JANATA NEWS

ಬೆಂಗಳೂರು : ಪಕ್ಷದ ಸಂಘಟನೆಗೆ ನಾವು ನಮ್ಮ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಸರ್ಕಾರ ಇದೆ ಎಂದು ಚುನಾವಣಾ ಬಾಂಡ್ ಹೆಸರಲ್ಲಿ ಹಣ ಸಂಗ್ರಹಿಸಿದ್ದಾರೆ. ಆದರೆ ನಮಗೆ ಬಾಂಡ್ ಕೊಡುವವರಿಲ್ಲ. ಹೀಗಾಗಿ ಪಕ್ಷದ ಸಂಘಟನೆಗೆ ನಾವು ನಮ್ಮ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಏನಾದರೂ ಟೀಕೆ ಮಾಡಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಅರ್ಜಿ ಶುಲ್ಕ 5 ಸಾವಿರ ಹಾಗೂ ಅರ್ಜಿ ಸಲ್ಲಿಸುವಾಗ 2 ಲಕ್ಷ, 1 ಲಕ್ಷ ರು. ಡಿಡಿ ಪಡೆದರೆ ಬಿಜೆಪಿಯವರಿಗೇನು ನೋವು ಎಂದು ಡಿಕೆಶಿ ಕಿಡಿಕಾರಿದರು.
ನಿಮ್ಮ ಪಕ್ಷದ ಕಾರ್ಯಕರ್ತರೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಎಂಬ ಪ್ರಶ್ನೆಗೆ, 'ನನ್ನ ಬಳಿ ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ. ಅಸಮಾಧಾನಗೊಳ್ಳುವವರು ಪಕ್ಷದಲ್ಲಿ ಇರುವುದು ಬೇಡ, ಅವರು ಪಕ್ಷ ತೊರೆಯಬಹುದು. ಪಕ್ಷದ ವತಿಯಿಂದ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ಪಕ್ಷದ ವಿಚಾರ. ಪಕ್ಷ ಉಳಿಯಬೇಕು. ಪಕ್ಷ ಹಾಗೂ ಪಕ್ಷದ ಬಾವುಟ ಕಟ್ಟುವವರು ಯಾರು? ಮಾತನಾಡುವವರು ಬಂದು ಪಕ್ಷ ಕಟ್ಟುತ್ತಾರಾ?' ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಬಾಗಿಲು ಕ್ಲೋಸ್ ಆಗಲಿದೆ ಎಂಬ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬಾಗಿಲು ಮುಚ್ಚುವುದಾದರೆ, ಅವರು ಕಾಂಗ್ರೆಸ್ ಶಾಸಕರನ್ನು ಕಾಡಿ ಬೇಡಿ, ಕಾಲಿಗೆ ಬಿದ್ದು, ಹಣ ಕೊಟ್ಟು ಖರೀದಿ ಮಾಡಿದರಲ್ಲ. ನಮ್ಮ ಪಕ್ಷದ 13 ಹಾಗೂ ಜೆಡಿಎಸ್ನ 3 ಸದಸ್ಯರನ್ನು ಕರೆದುಕೊಂಡರಲ್ಲ, ಆಗೇನು ಅವರ ಪಕ್ಷದ ಬಾಗಿಲು ಬಂದ್ ಆಗಿತ್ತಾ? ಅವರಿಗೆ ತಾಕತ್ತಿದ್ದರೆ ಜನಮತದ ಆಧಾರದ ಮೇಲೆ ಗೆಲ್ಲಬೇಕಿತ್ತು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ' ಎಂದು ಕಿಡಿಕಾರಿದರು.