ಪ್ರಯಾಣಿಕರ ತಂಗುದಾಣದಲ್ಲಿದ್ದ ಎರಡು ಗುಂಬಜ್ ಗಳ ತೆರವು | JANATA NEWS

ಮೈಸೂರು : ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್ ಗಳ ಪೈಕಿ ಎರಡು ಚಿಕ್ಕ ಗುಂಬಜ್ ಗಳನ್ನು ಕೊನೆಗೂ ತೆರವು ಮಾಡಲಾಗಿದೆ.
ನಗರದ ನಂಜನಗೂಡು ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜಂಕ್ಷನ್ ಬಳಿ ಮತ್ತು ಜೆ.ಪಿ.ನಗರ ಸೇರಿದಂತೆ ಕೃಷ್ಣರಾಜ ಕ್ಷೇತ್ರದಲ್ಲಿ ಗುಂಬಜ್ ಮಾದರಿಯಲ್ಲಿ ಮೂರು ತಂಗುದಾಣಗಳನ್ನು ನಿರ್ಮಿಸಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ 'ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ.
ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು' ಎಂದು ಬರೆದಿದ್ದಾರೆ.
ಡೂಮ್ ಗಳ ತೆರವಿನ ಕುರಿತು ಕೃಷ್ಣ ರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಳೆದ 30 ವರ್ಷದಿಂದ ರಾಜಕೀಯದಲ್ಲೇ ಇದ್ದೇನೆ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಹಳ ಅವಶ್ಯಕ ವಾದ ಮಂತ್ರ. ಅಭಿವೃದ್ಧಿ ಕಾರ್ಯದಲ್ಲಿ ಸರ್ವ ಜಾತಿ, ಧರ್ಮ, ಪಂಗಡಗಳನ್ನು ಒಟ್ಟಾಗಿ ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ತೆಗೆದುಕೊಂಡು ಹೋಗಿದ್ದೇನೆ.
ಕ್ಷೇತ್ರದಲ್ಲಿ ಇಲ್ಲಿವರೆಗೆ ಯಾವುದೇ ವಿವಾದ ನಡೆದಿರಲಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ 12 ಬಸ್ ನಿಲ್ದಾಣಗಳನ್ನ ಶಾಸಕರ ನಿಧಿಯಿಂದ ನಿರ್ಮಿಸಲಾಗಿತ್ತು. ಆದ್ರೆ, ಬಸ್ ನಿಲ್ದಾಣದ ಗೋಪುರ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಬಸ್ ನಿಲ್ದಾಣಗಳನ್ನ ಮೈಸೂರು ಅರಮನೆ ಮಾದರಿ ನಿರ್ಮಿಸಬೇಕು ಎಂಬ ಆಸೆ ಇತ್ತು. ಅದೇ ಮಾದರಿಯಲ್ಲೇ ಅದನ್ನ ನಿರ್ಮಾಣ ಮಾಡಲಾಗಿದೆ. ಆದ್ರೆ, ಅದಕ್ಕೆ ಧರ್ಮದ ಲೇಪನ ಮಾಡಿರುವುದು ಬೇಸರ ತಂದಿದೆ. ಬಸ್ ನಿಲ್ದಾಣದ ಮೇಲಿನ ಗುಂಬಜ್ಗಳನ್ನ ವಿವಾದವಾಗಿ ಸೃಷ್ಟಿಸಿರುವುದು ನೋವುಂಟು ಮಾಡಿದೆ ಎಂದಿದ್ದಾರೆ.
ಇದೊಂದು ವಿವಾದಿತ ಕೇಂದ್ರವನ್ನಾಗಿ ಮುಂದೆ ಕಪ್ಪು ಚುಕ್ಕೆ ನಿರ್ಮಾಣ ಮಾಡಬಾರದು ಎಂದು ಎರಡು ಡೂಮ್ ಗಳನ್ನು ತೆರವು ಮಾಡಿ ತಂಗುದಾಣವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಪರೋಕ್ಷವಾಗಿ ಸ್ವಪಕ್ಷದ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.