ಬೆಂಗಳೂರು ಡಬಲ್ ಮರ್ಡರ್ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್ | JANATA NEWS
ಬೆಂಗಳೂರು : ನಗರದ ಕೋರಮಂಗಲದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪ್ರಕರಣ ವರದಿಯಾದ 48 ಗಂಟೆಗಳಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 17ರ ರಾತ್ರಿ ಕೋರಮಂಗಲ ಆರನೇ ಹಂತದಲ್ಲಿರುವ ಕಾಂಟ್ರಾಕ್ಟರ್ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ದಿಲ್ ಬಹದ್ದೂರ್ ಹಾಗೂ ಮನೆ ಕೆಲಸಗಾರ ಕರಿಯಪ್ಪ ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು
ಜಗದೀಶ ಹಾಗೂ ಸುನೀಲ ಎಂಬ ಆರೋಪಿಗಳನ್ನು ಬ್ಯಾಡರಹಳ್ಳಿ ಬಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಜಗದೀಶ ಮನೆ ಮಾಲೀಕ ಗೋಪಾಲರೆಡ್ಡಿ ಅವರ ಮಾಜಿ ಕಾರು ಚಾಲಕನಾಗಿದ್ದನು. ಬೆಲೆಬಾಳುವ ಕಾರನ್ನ ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದನು. ಈ ವಿಚಾರದಲ್ಲಿ ಗೋಪಾಲರೆಡ್ಡಿ ಜಗದೀಶನ ಕೆನ್ನೆಗೆ ಹೊಡೆದಿದ್ದರು. ಅಂದಿನಿಂದ ರೆಡ್ಡಿ ಮೇಲೆ ಜಗದೀಶನಿಗೆ ಸಿಟ್ಟು ಇತ್ತು ಎಂಬುದು ತಿಳಿದುಬಂದಿದೆ.
ಘಟನೆ ನಂತರ ಗೋಪಾಲ ರೆಡ್ಡಿಯವರು ಜಗದೀಶನನ್ನು ಕೆಲಸದಿಂದ ತೆಗೆದು ಬೇರೊಬ್ಬರನ್ನು ನೇಮಿಸಿದ್ದರು. ಆದರೆ ಜಗದೀಶ ಗೋಪಾಲರೆಡ್ಡಿಯ ಹೊಸ ಚಾಲಕನ ಜೊತೆ ಮಾತುಕತೆ ಮುಂದುವರಿಸಿದ್ದ. ಅಲ್ಲದೆ ಮನೆಗೆಲಸ ಮಾಡುತ್ತಿದ್ದ ಕರಿಯಪ್ಪನ ಜೊತೆ ಫೋನ್ ಸಂಪರ್ಕದಲ್ಲಿದ್ದನು. ಹೀಗೆ ಡಿ.17 ರಂದು ಜಗದೀಶ ಕರಿಯಪ್ಪನಿಗೆ ಕರೆ ಮಾಡಿದ್ದಾಗ ಗೋಪಾಲರೆಡ್ಡಿ ಆಂದ್ರಪ್ರದೇಶದ ಮದುವೆ ಸಮಾರಂಭಕ್ಕೆ ಹೋಗಿದ್ದಾರೆ ಎಂದಿದ್ದಾನೆ.
ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಜಗದೀಶ್ ತನ್ನ ಸ್ನೇಹಿತ ಲಗ್ಗೆರೆಯ ಕಿರಣ್ ಹಾಗೂ ಆತನ ಸಹೋದರ ಅಭಿಷೇಕ್ ಜೊತೆ ಸೇರಿ ಗೋಪಾಲರೆಡ್ಡಿಯ ಮನೆಗೆ ಬಂದಿದ್ದನು. ಗೋಪಾಲರೆಡ್ಡಿಯ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಜಗದೀಶ್ ಮೊದಲು ಸ್ಟೂಲ್ ಬಳಸಿ ಮನೆಯ ಹಿಂಭಾಗದ ಕಂಪೌಂಡ್ ಜಿಗಿದು ಒಳಬಂದಿದ್ದನು.
ಬಳಿಕ ಸಿಸಿ ಕ್ಯಾಮರಾಗಳ ವೈರ್ ಕತ್ತರಿಸಿ ಸೆಕ್ಯೂರಿಟಿ ರೂಂನಲ್ಲಿದ್ದ ದಿಲ್ ಬಹದ್ದೂರ್ನನ್ನು ಉಸಿರುಗಟ್ಟಿಸಿ ಮೈ ಕೈಗೆ ಟೇಪನ್ನು ಸುತ್ತಿ ಸಂಪ್ಗೆ ಎಸೆದಿದ್ದನು. ನಂತರ ಕಿರಣ್ ಹಾಗೂ ಅಭಿಷೇಕನನ್ನು ಮನೆಯ ಕಾಂಪೌಂಡಿನೊಳಗೆ ಕರೆಸಿಕೊಂಡಿದ್ದನು.
ಮೂವರೂ ಸೇರಿ ಇಡೀ ರಾತ್ರಿ ಮನೆಯ ಬಾಗಿಲ ಬಳಿ ಕಾದು ಕುಳಿತಿದ್ದರು. ಡಿಸೆಂಬರ್ 17ರ ಬೆಳಗ್ಗೆ ಮನೆಗೆಲಸದ ಕರಿಯಪ್ಪ ಮನೆ ಬಾಗಿಲು ತೆರೆಯುತ್ತಿದ್ದಂತೆ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಬಂದ ಆಟೋದಲ್ಲೇ ಪರಾರಿಯಾಗಿದ್ದರು.