ಗೋವಾಕ್ಕೆ ಹೋಗಿ ಪ್ರೇಯಸಿಯ ಜೊತೆ ಮೋಜು-ಮಸ್ತಿ ಮಾಡಲು ಸಹೋದರನ ಮನೆಗೆ ಕನ್ನ | JANATA NEWS
ಬೆಂಗಳೂರು : ಗೋವಾಕ್ಕೆ ಹೋಗಿ ಪ್ರೇಯಸಿಯ ಜೊತೆ ಮೋಜು-ಮಸ್ತಿ ಮಾಡಲು ಸಹೋದರನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಇರ್ಫಾನ್ ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ .
ಸಹೋದರ ಸಲ್ಮಾನ್ ಸುದ್ದುಗುಂಟೆಪಾಳ್ಯದಲ್ಲಿ ಸೇಲ್ಸ್ಮ್ಯಾನ್ ಕೆಲಸ ಮಾಡಿಕೊಂಡಿದ್ದ. ಇನ್ನು ತಮ್ಮ ಇರ್ಫಾನ್ ಮಾತ್ರ ಕೆಲಸವಿಲ್ಲದೇ ಓಡಾಡಿಕೊಂಡಿದ್ದನು. ಕೆಲಸವಿಲ್ಲದಿದ್ದರೂ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆರೋಪಿ, ಆಕೆಯನ್ನು ಗೋವಾಗೆ ಪ್ರವಾಸ ಹೋಗುವ ಬಯಕೆಯನ್ನು ಪೂರ್ಣಗೊಳಿಸಲು ಮನೆಯಲ್ಲಿ ಬೀರುವಿನಲ್ಲಿದ್ದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
ನವೆಂಬರ್ 29ರಂದು ಮನೆಯ ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಮನೆಯವರಿಗೆ ಗೊತ್ತಾಗಿದೆ. ಅತ್ತ ನಾಲ್ಕೈದು ದಿನಗಳಿಂದ ಮನೆಗೆ ಇರ್ಫಾನ್ ಬಂದಿರಲಿಲ್ಲ. ಅನುಮಾನಗೊಂಡ ಸಲ್ಮಾನ್, ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಆಡುಗೋಡಿ ಪೊಲೀಸರು ಕಳ್ಳತನದಲ್ಲಿ ಇರ್ಫಾನ್ ಕೈವಾಡವನ್ನು ಬಯಲು ಮಾಡಿದ್ದಾರೆ.