ಹೊಸ ವರ್ಷಾಚರಣೆ ಹಿನ್ನಲೆ ನದಿಗೆ ಈಜಲು ತೆರಳಿದ್ದ ಮೂವರು ನೀರುಪಾಲು | JANATA NEWS
ಹಾವೇರಿ : ಹೊಸ ವರ್ಷಾಚರಣೆ ಹಿನ್ನಲೆ ನದಿಗೆ ಈಜಲು ತೆರಳಿದ್ದ ಮೂವರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.
ನದಿ ಬಳಿ ನ್ಯೂ ಇಯರ್ ಪಾರ್ಟಿ ಮಾಡಲು ಹೋಗಿದ್ದ ಯುವಕರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನದಿಯಿಂದ ಮೂವರ ಮೃತದೇಹಗಳನ್ನು ಪತ್ತೆ ಹಚ್ಚಿ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮೃತರನ್ನು ನೂಕಾಪುರ ಗ್ರಾಮದ ನವೀನ್, ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ವಿಕಾಸ್ ಮತ್ತು ನೇಪಾಳ ಮೂಲದ ಪ್ರೇಮ ಪಾಂಗಲ್ ಎಂದು ಗುರುತಿಸಲಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ನಿಸರ್ಗ ಡಾಬಾದಲ್ಲಿ ಕೆಲಸ ಮಾಡುವ 11 ಯುವಕರು ಮುದೇನೂರಿನ ತುಂಗಭದ್ರಾ ನದಿಗೆ ಈಜಲು ತೆರಳಿದ್ದರು. ಈ ಸಮಯದಲ್ಲಿ ಈಜು ಬಾರದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.