ಪತಿಯ ಜತೆ ಸೇರಿ ಪ್ರಿಯಕರನ ಹತ್ಯೆ, ಶವದೊಂದಿಗೆ ಬೈಕ್ನಲ್ಲಿ ಥ್ರಿಬಲ್ ರೈಡ್ | JANATA NEWS
ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಮುಗಿಸಲು ಮಹಿಳೆ ಪ್ಲ್ಯಾನ್ ಮಾಡಿದ್ದಳು, ಆದರೆ ಪ್ರಿಯಕರನೇ ಕೊಲೆಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ರೀನಾ ಹಾಗೂ ಗಂಗೇಶ್ ದಂಪತಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ವಾಸವಿದ್ದರು. ಗಂಗೇಶ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದರೆ, ರೀನಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಕೊರಿಯರ್ ಡಿಲವರಿ ಮಾಡುತ್ತಿದ್ದ ಅಸ್ಸಾಂ ಮೂಲದ ನಿಬಾಶಿಸ್ ಪಾಲ್ ಮತ್ತು ರೀನಾ ಪರಿಚಯವಾಗಿ ಬಳಿಕ ದೈಹಿಕ ಸಂಬಂಧಕ್ಕೆ ತಿರುಗಿತ್ತು.
ಇಬ್ಬರು ಒಂದಾಗಲು ಗಂಡನನ್ನೇ ಕೊಲೆ ಮಾಡಲು ರೀನಾ ಸ್ಕೆಚ್ ಸಿದ್ದಪಡಿಸಿದ್ದಳಂತೆ. ಆದರೆ ಈ ವಿಚಾರ ತಿಳಿದ ಪತಿ ಗಂಗೇಶ್, ತನ್ನ ಪತ್ನಿಯನ್ನು ನಗರದಲ್ಲೇ ಬಿಟ್ಟು ಉತ್ತರ ಪ್ರದೇಶ ಸ್ವಗ್ರಾಮಕ್ಕೆ ತೆರಳಿದ್ದ. ಇಷ್ಟೇ ಸಾಕು ಅಂದುಕೊಂಡಿದ್ದ ರೀನಾ, ಪ್ರಿಯಕರನೊಂದಿಗೆ ಸುತ್ತಾಡಿಕೊಂಡಿದ್ದಳು.
ಆದರೆ ಕೆಲ ದಿನಗಳ ಬಳಿಕ ತನ್ನ ನೈಜ ಮುಖ ತೋರಿಸಿದ್ದ ಪ್ರಿಯಕರ, ರೀನಾಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದನಂತೆ. ಅಲ್ಲದೇ ಬೇರೆ ಪುರುಷರೊಂದಿಗೆ ಮಲಗಿಕೊಳ್ಳವಂತೆ ಒತ್ತಾಯ ಮಾಡುತ್ತಿದ್ದನಂತೆ.
ಪ್ರಿಯಕರನ ಹಿಂಸೆ ತಾಳಲಾಗದೆ, ಮತ್ತೆ ಗಂಡನ ಪಾದವೇ ಮೇಲು ಎಂದುಕೊಂಡಿದ್ದ ರೀನಾ, ಗಂಗೇಶ್ಗೆ ಕರೆ ಮಾಡಿ ತನಗೆ ಆಗುತ್ತಿದ್ದ ಹಿಂಸೆಗಳನ್ನು ಹೇಳಿಕೊಂಡಿದ್ದಳಂತೆ. ಅಲ್ಲದೇ ಇದೊಂದು ಬಾರಿ ನನ್ನದು ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡಿದ್ದಾಳೆ.
ಡಿ. 3ರಂದು ಆರೋಪಿಗಳು ನಿಭಾಶಿಸ್ನ ಕತ್ತು ಬಿಗಿದು ಕೊಲೆಗೈದಿದ್ದರು. ಸುಮಾರು 3 ರಿಂದ 4 ಗಂಟೆ ಕಾಲ ಬೈಕ್ ಮೇಲೆ ಮೃತದೇಹವನ್ನು ಇಟ್ಟುಕೊಂಡು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸ್ಥಳ ಸಿಗದ ಕಾರಣ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ತೆರಳಿ ನಿರ್ಜನ ಪ್ರದೇಶವೊಂದರಲ್ಲಿ ಮೃತದೇಹ ಎಸೆದು ಬಂದಿದ್ದರು.ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಗಳ ಕೃತ್ಯ ಬಯಲಾಗಿದೆ.