ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯಾಭಿಷೇಕ, ಶಿವಲಿಂಗ ಸ್ಪರ್ಶಿಸಿತು ಸೂರ್ಯ ಕಿರಣ! | JANATA NEWS
ಬೆಂಗಳೂರು : ಗವಿಗಂಗಾಧರೇಶ್ವರನ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ಸೂರ್ಯ ರಶ್ಮಿ ಗವಿಗಂಗಾಧರನ ಲಿಂಗವನ್ನು ಸ್ಪರ್ಶಿಸುತ್ತದೆ.
ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ತನ್ನ ಪಥ ಬದಲಿಸುವಾಗ ಗವಿಗಂಗಾಧರೇಶ್ವರನ ಲಿಂಗವನ್ನು ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ.
ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯರಶ್ಮಿಯು ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗ ಸ್ಪರ್ಶಿಸಿತು. ಸಂಜೆ 5.20ಕ್ಕೆ ಶಿವಲಿಂಗವನ್ನು ಸೂರ್ಯ ಸ್ಪರ್ಶಿಸಿದ್ದು, 8 ನಿಮಿಷಗಳ ಕಾಲ ಶಿವನಿಗೆ ಭಾಸ್ಕರನ ಕಿರಣಾಭಿಷೇಕವಾಗಿದೆ. ಅಸಂಖ್ಯಾತ ಭಕ್ತರು ಈ ಕೌತುಕಕ್ಕೆ ಸಾಕ್ಷಿಯಾದರು.
ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಬಗೆಯ ಅಭಿಷೇಕಗಳು ನಡೆದವು. ಸೂರ್ಯನ ಕಿರಣಗಳ ಅದ್ಭುತ ಅಭಿಷೇಕದ ಜೊತೆಗೆ ಗಂಗಾಧರೇಶ್ವರನಿಗೆ ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿತು
ಪ್ರತಿ ವರ್ಷ ಸಂಕ್ರಾಂತಿಯಂದು ನಡೆಯುವ ಪ್ರಕೃತಿಯ ಈ ವಿಸ್ಮಯವನ್ನು ನೋಡಲು ಭಕ್ತ ಸಾಗರವೇ ನೆರೆದಿರುತ್ತದೆ.