ಬಂಜಾರ ಸಮುದಾಯದ 51 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ | JANATA NEWS
![](2023/January/Jimg/1674135138.jpeg)
ಕಲಬುರ್ಗಿ : ಕಲಬುರಗಿಯ ಮಳಖೇಡಾದಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ತಾಂಡಾ ಮತ್ತು ಹಟ್ಟಿಗಳಲ್ಲಿ ವಾಸವಾಗಿರುವ 51 ಸಾವಿರ ಕುಟುಂಬಸ್ಥರಿಗೆ ಹಕ್ಕು ಪತ್ರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿತರಿಸಿದ್ದಾರೆ.
ಯಾದರಿಗಿಯಿಂದ ನೇರವಾಗಿ Mi-17V5 ಹೆಲಿಕಾಪ್ಟರ್ ಮೂಲಕ ಇಲ್ಲಿಯ ಸೇಡಂ ತಾಲೂಕಿನ ಮಳಖೇಡಕ್ಕೆ ಬಂದಿದ್ದಾರೆ. ಪ್ರಧಾನಿ ಮೋದಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಸಾಥ್ ನೀಡಿದ್ದಾರೆ.
ತಾಂಡಾ ನಿವಾಸಿಗಳಿಗೆ ದೇಶದಲ್ಲಿಯೇ ಐತಿಹಾಸಿಕವಾಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ 5 ಜಿಲ್ಲೆಗಳ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ಹಕ್ಕು ಪತ್ರ ನೀಡಿದ್ದರಿಂದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ತಂಡ ರಾಜ್ಯ ಸರ್ಕಾರಕ್ಕೆ ವೇದಿಕೆ ಮೇಲೆ ಪ್ರೋವಿಜನಲ್ ಪ್ರಮಾಣ ಪತ್ರ ನೀಡಿತು.
ಸರ್ಕಾರಿ ದಾಖಲೆಯ ಮೂಲಕ ಲಂಬಾಣಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಜೊತೆಗೆ ಉಚಿತವಾಗಿ ರಿಜಿಸ್ಟ್ರೇಷನ್ ಮಾಡುವ ಅವಕಾಶ ನೀಡಲಾಗಿದೆ. ಇದೊಂದು ಗಿನ್ನೆಸ್ ದಾಖಲೆಯಾಗಿದ್ದು, ಇಲ್ಲಿಯವರೆಗೆ ತಾಂಡಗಳಲ್ಲಿ ಲಂಬಾಣಿಗಳು ವಾಸಿಸುತ್ತಿದ್ದರು. ಆದರೀಗ ಲಂಬಾಣಿಗಳು ತಾಂಡ ಬದಲಾಗಿ ಗ್ರಾಮಗಳಲ್ಲಿ ವಾಸಿಸುವ ಅವಕಾಶ ಕಲ್ಪಿಸಲಾಗಿದೆ.
ನಗಾರಿ ಬಾರಿಸಿದ ಮೋದಿ ಸಂಕೇತಿಕವಾಗಿ 5 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದರು. ಆರಂಭದಲ್ಲಿ ಲಂಬಾಣಿ ಭಾಷೆಯಲ್ಲಿ ಮಾತನಾಡಿದ ಮೋದಿ ಬಳಿಕ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ದೇಶದಲ್ಲಿ ಸುದೀರ್ಘವಾಗಿ ಆಡಳಿತ ನಡೆಸಿದವರು ದಲಿತರು, ಆದಿವಾಸಿಗಳು ಮತ್ತು ವಂಚಿತರ ಏಳ್ಗೆ ಬಗ್ಗೆ ಗಮನ ಹರಿಸಲಿಲ್ಲ. ಸಮಾಜದ ವಂಚಿತ ವರ್ಗಗಳ ಹೆಸರಲ್ಲಿ ಕೇವಲ ಘೋಷವಾಕ್ಯಗಳ ಮೂಲಕ ಅವರ ಮತಗಳನ್ನು ಮಾತ್ರ ಪಡೆದರು. ಆದರೆ, ಈ ಸಮಾಜದ ಜನರ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದರು.
ಈ ಸಮುದಾಯವರು ಹಕ್ಕುಗಳಿಗಾಗಿ ಬಹಳ ಸಂಘರ್ಷ ನಡೆಸುತ್ತಿದ್ದರು. ಹಿಂದಿನ ಸರ್ಕಾರಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿದ್ದವು. ಹಿಂದಿನ ಸರಕಾರಗಳು ಉದಾಸಿನ ಮಾಡುತ್ತಿದ್ದವು. ಆದರೆ ಬಿಜೆಪಿ ಸರ್ಕಾರವು ಹಕ್ಕು ಪತ್ರಗಳನ್ನು ನೀಡಿ ಅವರಿಗೆ ಒಂದು ಹಕ್ಕು ನೀಡಿದೆ. ನಮ್ಮ ದೇಶಕ್ಕೆ ಸಂವಿಧಾನ ರಚನೆಯಾದ ತಿಂಗಳಿನಲ್ಲಿ ಈ ಹಕ್ಕು ಕೊಟ್ಟಿರುವುದಕ್ಕೆ ನನಗೆ ಬಹಳ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ 25 ವರ್ಷಗಳು ಭಾರತಕ್ಕೆ ಅಮೃತ ಕಾಲ, ಭಾರತ ಇಂದು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಸಮಯವನ್ನು ಕಾಣಲಿದೆ ಎಂದರು