ಸ್ಯಾಂಟ್ರೋ ರವಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ | JANATA NEWS
ಮೈಸೂರು : ಸ್ಯಾಂಟ್ರೋ ರವಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸ್ಯಾಂಟ್ರೋ ರವಿ ಒಬ್ಬ ಪಿಂಪ್,ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪೋಕ್ಸೋ ಪ್ರಕರಣದ ಆರೋಪಿ.ಆತ ಹೊರಗೆ ಬಂದರೆ ಹಲವರ ಬಂಡವಾಳ ಹೊರಗೆ ಬರುತ್ತದೆ. ಆ ಕಾರಣದಿಂದ ಮುಚ್ಚಿಹಾಕುವ ಯತ್ನ ನಡೆದಿದೆ. ಸಿಐಡಿಗೆ ಪ್ರಕರಣವನ್ನು ವಹಿಸಿದ್ದು ಏಕೆ? ಆತನನ್ನು ಆರಂಭದಲ್ಲಿ ವಶಕ್ಕೆ ಪಡೆಯದೆ ಇರುವುದು ಏಕೆ? ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಏಕೆ? ಸಿಐಡಿ ಕೂಡ ರಾಜ್ಯ ಪೊಲೀಸ್ ಒಂದು ಘಟಕ. ಇದೆಲ್ಲದರ ಹಿಂದೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಜ್ಯ ಸರ್ಕಾರವು ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿಸಿದೆ. ಸಿಐಡಿ ಸ್ವತಂತ್ರ ಸಂಸ್ಥೆಯಲ್ಲ. ರಾಜ್ಯ ಸರ್ಕಾರದ ಕೆಳಗಿರುವ ಸಂಸ್ಥೆ, ಇವರು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಸ್ಯಾಂಟ್ರೋ ರವಿ ಪ್ರಕರಣವನ್ನು ಸರ್ಕಾರ ಸಿಐಡಿ ಮೂಲಕ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ. ರಾಜ್ಯದಲ್ಲಿ ಪಿಎಸ್ಐ ಹಗರಣ ನಡೆದಿರುವುದು ಸುಳ್ಳಾ? ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ ? ಏನು ಆಗಿಲ್ಲ ಅಂದರೆ ಆತ ಇನ್ನೂ ಏಕೆ ಜೈಲಿನಲ್ಲಿದ್ದಾನೆ? ರಾಜ್ಯಕ್ಕೆ ಪದೇ ಪದೇ ಬಿಜೆಪಿ ಕೇಂದ್ರ ನಾಯಕರ ಭೇಟಿ ಯಾರು ಬಂದರೂ ಏನು ಪ್ರಯೋಜನ ಇಲ್ಲ. ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ? ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ ? ಎಂದು ಪ್ರಶ್ನಿಸಿದರು.