ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನ : ಮತ್ತೊಮ್ಮೆ ವಿವಾದಾತ್ಮಕ ಪ್ರಶ್ನೆ ಎತ್ತಿದ ಕಾಂಗ್ರೆಸ್ ಮುಖಂಡ | JANATA NEWS
ಶ್ರೀನಗರ : ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತು ವಿರೋಧ ಪಕ್ಷ ಕಾಂಗ್ರೆಸ್ ಮತ್ತೊಮ್ಮೆ ವಿವಾದಾತ್ಮಕ ಪ್ರಶ್ನೆಯನ್ನು ಎತ್ತಿದೆ. ಈ ಬಾರಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಈ ಪ್ರಶ್ನೆಯನ್ನು ಎತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು 2016ರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವ ಮೂಲಕ ತಮ್ಮ ಪಕ್ಷಕ್ಕೆ ಮತ್ತೊಮ್ಮೆ ತಲೆನೋವುಂಟು ಮಾಡಿದ್ದಾರೆ.
ಜಮ್ಮುವಿನಲ್ಲಿ ಸೋಮವಾರ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಒಸಿಯಾದ್ಯಂತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತದೆ ಆದರೆ ಅದರ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಯನ್ನು ಒದಗಿಸಿಲ್ಲ ಎಂದು ಹೇಳಿದರು. “ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾರೆ. ನಾವು ತುಂಬಾ ಜನರನ್ನು ಕೊಂದಿದ್ದೇವೆ ಎಂದು. ಆದರೆ ಯಾವುದೇ ಪುರಾವೆ ಇಲ್ಲ. ಕೇವಲ್ ಝೂತ್ ಕಾ ಪುಲಿಂದಾ ಸೆ ಯಹ ರಾಜ್ ಕರ್ ರಹೇ ಹೈ(ಅವರು ಸುಳ್ಳಿನ ಕಂತೆ ಯಿಂದ ಇವರು ರಾಜ್ಯವಾಳುತ್ತಿದ್ದಾರೆ)" ಎಂದು ಹೇಳಿದರು.
ಭಾರತೀಯ ಸೇನೆಯ ವಿರುದ್ಧದ ಈ ಬೇಜವಾಬ್ದಾರಿ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕಪಡಿಸಿದೆ, ವಿರೋಧ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ "ದ್ವೇಷ" ದಿಂದ ಕುರುಡಾಗಿದೆ ಮತ್ತು ಸಶಸ್ತ್ರ ಪಡೆಗಳನ್ನು "ಅವಮಾನಿಸಿದೆ" ಎಂದು ಹೇಳಿದೆ.
ಈ ಮಧ್ಯೆ, ಪಕ್ಷದ ಹಿರಿಯ ಮುಖಂಡರ ಹೇಳಿಕೆಯಿಂದ ಕಾಂಗ್ರೆಸ್ ದೂರ ಕಾಯ್ದುಕೊಳ್ಳಲು ಮುಂದಾಗಿದೆ. "ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಅವರದೇ ಆಗಿದ್ದು, ಕಾಂಗ್ರೆಸ್ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಯುಪಿಎ ಸರ್ಕಾರ 2014ಕ್ಕೂ ಮುನ್ನ ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿತ್ತು. ರಾಷ್ಟ್ರೀಯ ಹಿತಾಸಕ್ತಿ ಹೊಂದಿರುವ ಎಲ್ಲಾ ಮಿಲಿಟರಿ ಕ್ರಮಗಳನ್ನು ಕಾಂಗ್ರೆಸ್ ಬೆಂಬಲಿಸಿದೆ ಮತ್ತು ಬೆಂಬಲಿಸುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.