30 ಸಾವಿರ ಕೋಟಿ ರೂಪಾಯಿ ಚುನಾವಣೆಯಲ್ಲಿ ಖರ್ಚು : ಬಿಜೆಪಿ ವಿರುದ್ಧ ಪೊಲೀಸರಿಗೆ ಕಾಂಗ್ರೆಸ್ ದೂರು | JANATA NEWS
ಬೆಂಗಳೂರು : ಭ್ರಷ್ಟಚಾರದಿಂದ ಗಳಿಸಿದ 30 ಸಾವಿರ ಕೋಟಿ ರೂಪಾಯಿಗಳನ್ನು ಈ ಚುನಾವಣೆಯಲ್ಲಿ ಹಂಚಿಕೆ ಮಾಡಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ತನಿಖೆ ನಡೆಸುವಂತೆ ದೂರು ನೀಡಿದೆ.
ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ರೂ. ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಮಂಗಳವಾರ ಪಕ್ಷದ ಪ್ರಮುಖ ನಾಯಕರು ದೂರು ನೀಡಿದ್ದಾರೆ.
ಚುನಾವಣಾ ಆಯೋಗದ ಕಾಯ್ದೆ ಪ್ರಕಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ಆದರೆ ಬಿಜೆಪಿ ಅದಕ್ಕೆ ವಿರುದ್ಧವಾಗಿದೆ, ಆಮಿಶವೊಡ್ಡಿ ಮತ ಸೆಳೆಯುವ ಯತ್ನ ನಡೆಸಿದೆ. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಹುನ್ನಾರವಾಗುತ್ತಿದೆ. ಪ್ರಜಾಪ್ರಭುತ್ವ ಉಳಿಸುವುದು ಅಧಿಕಾರಿಗಳ ಕರ್ತವ್ಯ. ಅದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ರಮೇಶ್ ಜಾರಕಿಹೊಳಿ ಬಹಿರಂಗವಾಗಿ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಲಭ್ಯವಿದೆ. ಅದನ್ನು ಆಧರಿಸಿ ವಿವಿಧ ಸೆಕ್ಷನ್ಗಳ ಅಡಿ ಪೊಲೀಸರಿಗೆ ಇಂದು ದೂರು ನೀಡಿದ್ದೇವೆ. ನಂತರ ಚುನಾವಣೆ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.