ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡಿದ್ದು ತಮಾಷೆಗೆ, ಟಿಕೆಟ್ ಕೊಡಿ ಅಂತಾ ಬರಬೇಡಿ! | JANATA NEWS
ಬೆಂಗಳೂರು : ಭವಾನಿ ರೇವಣ್ಣ ಅವರನ್ನು ಪಕ್ಷಕ್ಕೆ ತಮಾಷೆಗೆ ಆಹ್ವಾನ ಮಾಡಿದ್ದು. ಇನ್ನು ನೀವೇ ಹೇಳಿದ್ದೀರಿ ಎಂದು ನಮ್ಮಲ್ಲಿ ಬಂದು ಟಿಕೆಟ್ ಕೇಳಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ತಮ್ಮ ನಿವಾಸದ ಬಳಿ ಮಾತನಾಡಿದ ಸಿ.ಟಿ ರವಿ, ನಾನು ಹೇಳಿದ್ದು ಶುದ್ಧ ತಮಾಷೆಗಾಗಿ. ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೊಡಿ ಅಂತಾ ಬರಬೇಡಿ ಎಂದಿದ್ದಾರೆ.
ನಾನು ಹೇಳಿದ್ದು ತಮಾಷೆಗೆ. ಆದರೆ ನನ್ನನ್ನು ಮನೆ ಮುರುಕ ಎಂದು ಬಿಂಬಿಸುತ್ತಿದ್ದಾರೆ. ನನ್ನ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಭವಾನಿಯವರಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ನಾನು ಜೆಡಿಎಸ್ ಹೈಕಮಾಂಡ್ ಅಲ್ಲ, ಅವರ ಮನೆಯಲ್ಲಿಯೇ ಅವರ ಹೈಕಮಾಂಡ್ ಇದ್ದಾರೆ. ಕುಮಾರಸ್ವಾಮಿ ಬೇಕಾದರೆ ಇದು ಮನೆ ಜಗಳ ಎಂದು ಹೇಳಬಹುದು. ನಾನು ಹಾಗೆ ಹೇಳಕ್ಕಾಗಲ್ಲ ಅಂತ ಸಿ.ಟಿ.ರವಿ ಹೇಳಿದ್ದಾರೆ.
ಹಾಸನದಲ್ಲಿ ಪ್ರೀತಂ ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರೀತಂ ಜನಪ್ರಿಯತೆ ಇತ್ತೀಚೆಗೆ ಹೆಚ್ಚಾಗಿದೆ. ಜನರ ಬೆಂಬಲ ಪ್ರೀತಂ ಪರ ಇದೆ. ಜೆಡಿಎಸ್ನಿಂದ ಯಾರೇ ಅಭ್ಯರ್ಥಿ ಆದರೂ ಪ್ರೀತಂ ಗೆಲ್ಲೋದು ನಿಶ್ಚಿತ. ಭವಾನಿ ಅಕ್ಕ ಅವರಿಗೆ ಹಾಸನ ಸುರಕ್ಷಿತ ಕ್ಷೇತ್ರ ಅಲ್ಲ ಎಂದರು.