ಇದು ನನ್ನ ಕೊನೆಯ ಚುನಾವಣೆ ಎಂದ ಹೆಚ್.ಡಿ.ಕುಮಾರಸ್ವಾಮಿ! | JANATA NEWS

ರಾಮನಗರ : ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ. ಸೂಕ್ತ ಅಭ್ಯರ್ಥಿ ಸಿಕ್ಕಿದ್ದರೆ ನಾನು ನಿಲ್ಲುತ್ತಿರಲಿಲ್ಲ. ಇದೇ ನನ್ನ ಕೊನೆಯ ಚುನಾವಣೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಮಾತನಾಡಿದ ಅವರು, ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ಚುನಾವಣೆಗೆ ನಿಲ್ಲಿ ಎಂದು ಮನವಿ ಮಾಡಿದರು. ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡಿದ್ದಾರೆ ಎಂದರು. ಆದರೆ ನಾನು ಇದಕ್ಕೆ ಹೆದರುವುದಿಲ್ಲ ಎಂದರು.
ಪ್ರತಿನಿತ್ಯ 16ರಿಂದ 18 ಗಂಟೆಗಳ ಕಾಲ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಸಹಕಾರ ಸಂಘದಲ್ಲಿ ಲೂಟಿ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಅಧಿಕಾರಿಗಳು ಯಾವ ರೀತಿ ನಡೆದುಕೊಳ್ತಿದ್ದಾರೆ ಗೊತ್ತು. ಅಧಿಕಾರ ಇಲ್ಲ ಎಂದು ನಾನು ಕುಗ್ಗಿಲ್ಲ, ಅಧಿಕಾರ ಸಿಕ್ಕಾಗ ದರ್ಪ ತೋರಿಲ್ಲ. ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾರೆ. ಪೊಳ್ಳು ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ. ನಮಗೆ BJP ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸರ್ಟಿಫಿಕೇಟ್ ಬೇಡ. ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಡಲಿಲ್ಲ. ನಾನು ಬೇರೆಯವರ ರೀತಿ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ. ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ. ಹಾಗಾಗಿ ಕಾರ್ಯಕರ್ತರು ಒಗ್ಗಟ್ಟಾಗಿ. ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನು ನೀವೇ ತಯಾರಿಸಿ ಎಂದು ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರ ಬಂದರೇ ಜಾನುವಾರುಗಳ ಮೇವಿಗೆ 50 ಪರ್ಸೆಂಟ್ ಸಬ್ಸಿಡಿ ಕೊಡುತ್ತೇವೆ. ಹಸುಗಳ ಫುಡ್ಗೆ ಸಬ್ಸಿಡಿ ನೀಡುತ್ತೇವೆ. ರೈತರಿಗೆ ಬಿತ್ತನೆ ಮಾಡಲು ಹತ್ತು ಸಾವಿರ ರೂ. ಒಂದು ಎಕರೆಗೆ ಹತ್ತು ಸಾವಿರ ರೂ, ಹತ್ತು ಎಕರೆಗೆ ಒಂದು ಲಕ್ಷ ರೂ. ಉಚಿತ ಹಣ ನೀಡಲಾಗುವುದು ಮತ್ತು ಹಾಲಿಗೆ ಪ್ರೋತ್ಸಾಹ ಧನ ಎಂಟು ರೂಪಾಯಿಗೆ ಹೇರಿಕೆ ಮಾಡುತ್ತೇವೆ. ಕ್ಷೇತ್ರಕ್ಕೆ ನಾನು ಪದೇ ಪದೇ ಬರಲು ಆಗಲ್ಲ. ನನಗೆ ಹಾಲು ಕೊಡುತ್ತೀರಾ, ಏನು ಕೊಡುತ್ತೀರಿ ಗೊತ್ತಿಲ್ಲ ಎಂದರು.