ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರತ್ಯಕ್ಷ | JANATA NEWS
ದಾವಣಗೆರೆ : ಇಂದು ಹೈಕೋರ್ಟ್ನಲ್ಲಿ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಮಾಡಾಳು ಗ್ರಾಮದ ಮನೆ ಬಳಿ ಶಾಸಕ ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ದಾರೆ.
ಲೋಕಾಯುಕ್ತ ಪೊಲೀಸರು ತಮ್ಮನ್ನು ಬಂಧಿಸಲು ಮುಂದಾಗಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದರು. 2-3 ದಿನಗಳಾಗದರೂ ಅವರು ಎಲ್ಲಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ದಾವಣಗೆರೆಯ ತಮ್ಮ ನಿವಾಸದ ಬಳಿ ಕಾಣಿಸಿಕೊಂಡಿದ್ದಾರೆ.
ಜಾಮೀನು ಆದೇಶ ತಲುಪಿದ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಅವರಿಗೆ ಸೂಚಿಸಲಾಗಿದೆ.
ವಿರೂಪಾಕ್ಷಪ್ಪ ಅವರು ಹುಟ್ಟೂರು, ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ. ಅವರು ವಾಪಸಾಗುತ್ತಿದ್ದಂತೆ ಬೆಂಬಲಿಗರು, ಕಾರ್ಯಕರ್ತರು ಶಾಸಕರ ನಿವಾಸದ ಬಳಿ ಜಮಾಯಿಸಿದರು.
ನಂತರ ವಿರೂಪಾಕ್ಷಪ್ಪ ಅವರು ಮಹದೇವಮ್ಮ ದೇವಿ ದರ್ಶನ ಪಡೆದರು. ಬಳಿಕ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬೆಂಬಲಿಗರು ಮಾಡಾಳ್ ವಿರೂಪಾಕ್ಷಪ್ಪ ಪರ ಘೋಷಣೆ ಕೂಗಿದರು.
ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ಮಾಡಾಳ್ಗೆ 48 ಗಂಟೆಯೊಳಗೆ ಲೋಕಾಯುಕ್ತರ ಮುಂದೆ ಸರೆಂಡರ್ ಆಗುವಂತೆ ಸೂಚಿಸಿತ್ತು. ಅಲ್ಲದೇ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದೂ ಆದೇಶಿಸಿದೆ. ಅಲ್ಲದೇ ಈ ಕುರಿತಾದ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತ್ತು.