ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜನಲ್ಲ, ಪೇಜಾವರ ಶ್ರೀ ಸ್ಪಷ್ಟನೆ | JANATA NEWS
ತುಮಕೂರು : ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜರು, ಎಂಬ ಮಿಥುನ್ ರೈ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಿರುಗೇಟು ಕೊಟ್ಟಿದ್ದಾರೆ.
ಆಧಾರ ರಹಿತವಾದ ಹೇಳಿಕೆ ಇಟ್ಟುಕೊಂಡು ಚರ್ಚಿಸಿದರೆ ಅದಕ್ಕೆ ಅರ್ಥವಿಲ್ಲ. ಕೃಷ್ಣ ಮಠಕ್ಕೆ ರಾಮಭೋಜ ಅರಸ ಜಾಗ ಕೊಟ್ಟಿದ್ದಕ್ಕೆ ಆಧಾರಗಳಿವೆ, ಗುರುಗಳ ಹೇಳಿಕೆಯನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀ ಹೇಳಿದ್ದಾರೆ.
ಮಧ್ವಾಚಾರ್ಯರು ಎಲ್ಲ ಶಿಷ್ಯರೊಡನೆ ಸೇರಿಕೊಂಡು ಬದ್ರಿ ಯಾತ್ರೆಗೆ ಹೊರಟಿದ್ರು. ಹಾಗೆ ಯಾತ್ರೆಗೆ ಹೋಗುವಾಗ ಗಂಗಾ ನದಿಯನ್ನ ದಾಟಬೇಕಿತ್ತು. ಅಲ್ಲೊಬ್ಬ ತುರ್ಕರ ರಾಜ ಆಳ್ವಿಕೆ ಮಾಡುತ್ತಿದ್ದನು. ನದಿ ದಾಟಲಿಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಆತ ನಿಲ್ಲಿಸಿದ್ದ. ಆಗ ಮಧ್ವಾಚಾರ್ಯರು ಗಂಗಾ ನದಿಯನ್ನ ಈಜಿಯೇ ದಾಟಲು ಮುಂದಾದರು. ಬಳಿಕ ಶಿಷ್ಯರಿಗೆ ತಮ್ಮ ಕಾಲನ್ನ ಹಿಡಿದುಕೊಳ್ಳಲು ಹೇಳಿದರು. ಆಗ ತುರ್ಕ ರಾಜನ ಸೈನಿಕರು ಇವರತ್ತ ಓಡಿಬಂದರು. ಆದರೆ ಮಧ್ವಾಚಾರ್ಯರು ಸ್ವಲ್ಪವೂ ಹೆದರದೇ ಅವರಿಗೆ ತಿಳಿ ಹೇಳಿದರು.
ಆದರೆ ಮಧ್ವಾಚಾರ್ಯರು ತಮ್ಮ ಶಿಷ್ಯರೊಂದಿಗೆ ನದಿಯನ್ನು ಈಜಿಕೊಂಡು ದಾಟುವಾಗ ಸೇನೆ ಇವರನ್ನು ತಡೆಯಲು ಬಂತು. ಈಜುತ್ತಲೇ ನಾವು ಬರುವವರೆಗೆ ಅಲ್ಲೇ ಇರಿ, ನಾವು ನಿಶಸ್ತ್ರಧಾರಿಗಳು ಎಂದು ಸೈನಿಕರಿಗೆ ತಿಳಿಸಿದರು. ನಂತರ ದಡ ತಲುಪಿ ನಿರ್ಭೀತರಾಗಿ ಸೈನಿಕರ ಕಡೆ ನಡೆದರು. ಆಚಾರ್ಯರ ತೇಜಸ್ಸು ತುಂಬಿದ ಮಮತೆಯ ಕಣ್ಣುಗಳಿಗೆ ತುರ್ಕರ ದೊರೆ ಕೂಡ ಪ್ರಭಾವಕ್ಕೆ ಒಳಗಾದ.
ಅದನ್ನ ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆ ಹೊರತು, ಉಡುಪಿ ಮಠದ ಜಾಗವನ್ನ ಮುಸ್ಲಿಂ ರಾಜರು ನೀಡಿದ್ದು ಎಂದು ಹೇಳಿದ್ದಲ್ಲ. ಈ ಗೊಂದಲದಿಂದ ಅವರು ಈ ರೀತಿಯ ಹೇಳಿಕೆ ಕೊಟ್ಟಿರಬಹುದು. ಆದ್ರೆ ಅದು ಆಧಾರ ರಹಿತವಾಗಿರೋದ್ರಿಂದ ಈ ಚರ್ಚೆಯನ್ನ ಮುಂದುವರಿಸೋದು ಅರ್ಥಹೀನ ಎಂಬುದು ನನ್ನ ಅನಿಸಿಕೆ ಎಂದಿದ್ದಾರೆ.