ಉರಿಗೌಡ ನಂಜೇಗೌಡ ಉಲ್ಲೇಖಿತ ಸುವರ್ಣ ಮಂಡ್ಯ ಪುಸ್ತಕ ಮರುಮುದ್ರಿಸಿ, ಜನತೆಗೆ ಹಂಚಿಕೆ! | JANATA NEWS

ಬೆಂಗಳೂರು : ಉರಿಗೌಡ, ನಂಜೇಗೌಡ ಉಲ್ಲೇಖಿಸಿರುವ ಸುವರ್ಣ ಮಂಡ್ಯ ಅವರ ಪುಸ್ತಕವನ್ನು ಮರುಮುದ್ರಿಸಿ, ಹಂಚಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಈ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಟಿಪ್ಪುವನ್ನು ಕೊಂದರೂ ಅಂತ ಹೇಳಿ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ವಾದಿಸುತ್ತಿದ್ದಾರೆ. ಆದರೆ 2006ರಲ್ಲಿ ಸುವರ್ಣ ಮಂಡ್ಯ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಿದ್ದರು ಎಂದು ಹೇಳಿದರು.
ಧರ್ಮದ ಉಳಿವಿಗಾಗಿ ಉರಿಗೌಡ, ನಂಜೇಗೌಡ ಹೋರಾಡಿದ್ದಾರೆ. ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದ ಉರಿಗೌಡ, ನಂಜೇಗೌಡರ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಹಿಂದೂಗಳನ್ನು ಕೊಂದಿದ್ದ ಟಿಪ್ಪು ಸುಲ್ತಾನ್ ಕನ್ನಡ ವಿರೋಧಿಯಾಗಿದ್ದನು. ಇದೇ ಟಿಪ್ಪು ವಿರುದ್ಧ ಉರಿಗೌಡ, ನಂಜೇಗೌಡ ಸೆಟೆದು ನಿಂತಿದ್ದರು, ಎಂದು ಹೇಳಿದ್ದಾರೆ.
ಆಗ ಸಿಎಂ ಆಗಿದ್ದವರು ಕುಮಾರಸ್ವಾಮಿ. ಆ ಪುಸ್ತಕಕ್ಕೆ ಮುನ್ನಡಿ ಬರೆದಿದ್ದು ಆಗ ಸಚಿವರಾಗಿದ್ದ ಚೆಲುವರಾಯಸ್ವಾಮಿ. ಮೈಸೂರಿನ ವಿಸಿಯಾಗಿದ್ದ ಜವರೇಗೌಡರು ಈ ಪುಸ್ತಕ ಬರೆದಿದ್ದರು.ಆಗ ಪುಸ್ತಕ ಬಿಡುಗಡೆಗೆ ಜೆಡಿಎಸ್ ನಾಯಕರು ಏಕೆ ಹೋಗಿದ್ದರು ?. ಆವತ್ತು ಕುಮಾರಸ್ವಾಮಿ ವಿರೋಧ ಏಕೆ ಮಾಡಿಲ್ಲ?. ಟಿಪ್ಪು ಹಿಂದೂ ವಿರೋಧಿ, ಧರ್ಮ ವಿರೋಧಿಯಾಗಿದ್ದಾರೆ. ಅವರು ಚರಿತ್ರೆಯನ್ನು ಓದಬೇಕಲ್ಲ. ಜಾತಿ ಹೆಸರಲ್ಲಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.