ಬಿಜೆಪಿ ರಾಹುಲ್ ಗಾಂಧಿಯ ಜನಪ್ರಿಯತೆ ಸಹಿಸದೇ ಅವರ ವ್ಯಕ್ತಿತ್ವ ದಮನ ಮಾಡುವ ಕೆಲಸ ಮಾಡುತ್ತಿದೆ | JANATA NEWS
ಮೈಸೂರು : ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ. ರಾಹುಲ್ ಗಾಂಧಿಯ ಜನಪ್ರಿಯತೆ ಸಹಿಸದೇ ಅವರ ವ್ಯಕ್ತಿತ್ವ ದಮನ ಮಾಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ, ಸಾಮಾಜಿಕ ಜಾಲತಾಣಗಳು ಪಪ್ಪು, ಬುದ್ದಿಗೇಡಿ ಅಂತೆಲ್ಲ ಗೇಲಿ ಮಾಡಿದ್ದರು.
ಇದಕ್ಕೆ ಭಾರತ್ ಜೋಡೋ ಯಾತ್ರೆ ಮೂಲಕ ಪ್ರತ್ಯುತ್ತರ ನೀಡಿದರು. ಲಂಡನ್ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು. ಅಲ್ಲಿಂದ ಬಂದ ಬಳಿಕ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ.
ಬಿಜೆಪಿಯವರು ತಮಗೆ ಬೇಕಾದಂತಹ ಜಡ್ಜ್, ಕೋರ್ಟ್ ಇರುವ ಜಾಗಕ್ಕೆ ಈ ಕೇಸ್ ತೆಗೆದುಕೊಂಡು ಹೋಗಿ ಶಿಕ್ಷೆ ಕೊಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯನ್ನ ಬಿಜೆಪಿಯವರು ಜೈಲಿಗೂ ಹಾಕಿಸಬಹುದು. ಇದು ಜನತಂತ್ರ ವ್ಯವಸ್ಥೆಯನ್ನೇ ಮುಗಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇ.54ರಷ್ಟು ಸಂಸದರ ಮೇಲೆ ಕ್ರಿಮಿನಲ್ ರೆಕಾರ್ಡ್ ಇದೆ. ಹೀಗಿದ್ದರೂ ಬಿಜೆಪಿ ದುರುದ್ದೇಶದಿಂದ ಈ ಕೆಲಸ ಮಾಡಿದೆ. ದ್ವೇಷದ ಸಾಧನೆಯನ್ನು ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.