ಕೈ ನೋಡಿ ಭವಿಷ್ಯ ಹೇಳ್ತೀನಿ ಎಂದು ವ್ಯಂಗ್ಯ, ಸ್ನೇಹಿತನನ್ನೇ ಹತ್ಯೆಗೈದ ಗೆಳೆಯ! | JANATA NEWS

ಬೆಂಗಳೂರು : ಕೈ ನೋಡಿ ಭವಿಷ್ಯ ಹೇಳುತ್ತ ಅಪಹಾಸ್ಯ ಮಾಡುತ್ತಿದ್ದ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ.
ನರೇಶ್ ಸಾವನ್ನಪ್ಪಿದ ವ್ಯಕ್ತಿ ಹಾಗೂ ಮಾರಿಮುತ್ತು ಬಂಧಿತ ವ್ಯಕ್ತಿ. ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದೇ ವಿಚಿತ್ರ ಮನಸ್ಥಿತಿಯವನಾಗಿದ್ದ. ಹನ್ನೊಂದು ವರ್ಷದವನಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ.
ಮೃತ ನರೇಶ್, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದ. ಗಾರೆ ಕೆಲಸ ಮಾಡಿಕೊಂಡಿದ್ದ. ಶನಿವಾರ ಮಧ್ಯಾಹ್ನ ಮಾರಿಮುತ್ತು ಜೊತೆ ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್ನಲ್ಲಿ ಕುಡಿಯಲು ಬಂದಿದ್ದ ನರೇಶ್ ನಿನ್ನ ಭವಿಷ್ಯ ಹೇಳ್ತೀನಿ ಎಂದು ಆತನ ಬಳಿ ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ, ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ ಎಂದು ಆತನನ್ನ ವ್ಯಂಗ್ಯವಾಡಿದ್ದಾನೆ.
ಸಿಟ್ಟಿಗೆದ್ದ ಮಾರಿಮುತ್ತು ಮತ್ತು ನರೇಶ್ ಬಾರ್ ಒಳಗಡೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಇಬ್ಬರೂ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದಿದ್ದ ಮಾರಿಮುತ್ತು ಪರಾರಿಯಾಗಿದ್ದ. ಕುಸಿದುಬಿದ್ದು ನರೇಶ್ ಸಾವನ್ನಪ್ಪಿದ್ದ.
ಮೃತನ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.