ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಪತ್ನಿ ಮೇಲೆ ಹಲ್ಲೆ | JANATA NEWS

ಮೈಸೂರು : ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕು ಸೋನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪತಿ ಚಂದ್ರು, ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿರುವ ಆರೋಪ ಕೂಡ ಕೇಳಿ ಬಂದಿದೆ.
ಸಂತ್ರಸ್ತೆಯನ್ನು ಶಿವಮ್ಮ ಎನ್ನಲಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದರಿಂದ ಸಮಾಧಾನಗೊಳ್ಳದ ಚಂದ್ರು, ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಶಿವಮ್ಮಗೆ ಚಿತ್ರಹಿಂಸೆ ನೀಡಿದ್ದಾನೆ.
ಗಂಡು ಮಗು ಬೇಕು ಎಂದು ಒತ್ತಾಯಿಸದೆ, ಶಿವಮ್ಮನಿಗೆ ಚಿತ್ರಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಚಂದ್ರು ಹಾಗೂ ಆತನ ಪೋಷಕರಿಗೆ ಕುಟುಂಬದ ಹಿರಿಯರು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಂದ್ರು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಚಿತ್ರಹಿಂಸೆ ತಾಳಲಾರದೆ ಶಿವಮ್ಮ ಪತಿ ವಿರುದ್ಧ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಪತಿ ಚಂದ್ರುವನ್ನು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮಾವ ರಾಮೇಗೌಡ ಅತ್ತೆ ಕೆಂಪಮ್ಮಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.