ಕಣ್ಣೀರಿಟ್ಟ ಜಗದೀಶ್ ಶೆಟ್ಟರ್ ಪತ್ನಿ, ಜಗದೀಶ್ ಶೆಟ್ಟರ್ ಅವರ ನಿರ್ಧಾರಕ್ಕೆ ನಾನು ಸಾಥ್ ನೀಡುತ್ತೇನೆ! | JANATA NEWS
ಹುಬ್ಬಳ್ಳಿ : ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ನಿವಾಸಕ್ಕೆ ಬಂದ ಜಗದೀಶ್ ಶೆಟ್ಟರ ಅವರನ್ನು ಪತ್ನಿ ಶಿಲ್ಪಾ ಶೆಟ್ಟರ ತಬ್ಬಿಕೊಂಡು ಕಣ್ಣೀರಿಟ್ಟರು.
ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಹಾಗೂ ಪಕ್ಷದ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಿ ಶೆಟ್ಟರ್ ಶೆಟ್ಟರ್ ಜಗದೀಶ್ ಶೆಟ್ಟರ್ ಎಂದು ಘೋಷಣೆ ಮೂಲಕ ಸಂಭ್ರಮಿಸಿದ್ದರು.
ಬರೋಬ್ಬರಿ 40 ವರ್ಷಗಳಿಗೂ ಅಧಿಕ ಕಾಲ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡದೆ ಮೋಸ ಮಾಡಲಾಗಿದೆ. ತಮ್ಮ ಪತಿಗೆ ಬಿಜೆಪಿ ವಿಶ್ವಾಸ ದ್ರೋಹ ಮಾಡಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಹುಬ್ಬಳ್ಳಿಯ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಯಾವುದು ಅಪರಾಧ ಇಲ್ಲದ ವ್ಯಕ್ತಿಗೆ ಕೈ ಕಾಲು ಕಟ್ಟಿ ಮನೆಯಲ್ಲಿ ಕುಳಿತುಕೊಳ್ಳಿ, ಅಧಿಕಾರ ನಿನ್ನ ಹೆಂಡತಿ ಮಾಡಲಿ, ನೀನು ಮನೆಯಲ್ಲಿ ಕೂರು ಎಂದರೆ ಅವರು ಮನೆಯಲ್ಲಿ ಕುಳಿತು ಅಡುಗೆ ಮಾಡಬೇಕಾ? ನಾನು ವಿಧಾನಸೌಧಕ್ಕೆ ಹೋಗಬೇಕಾ' ಎಂದು ಪ್ರಶ್ನಿಸಿದ್ದರು.
'ನನ್ನ ಗಂಡನನ್ನು ಮೆಟ್ಟಿ ನಾನು ವಿಧಾನಸೌಧ ಹತ್ತಬೇಕಾ ಎಂದು ಬಿಜೆಪಿ ನಾಯಕರು ಹೇಳಬೇಕು. ಇದರಿಂದ ನನ್ನ ಮನಸ್ಸು ನೊಂದಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧಳಾಗಿದ್ದೇನೆ. ಮೂವತ್ತು ವರ್ಷಗಳಿಂದ ಮತದಾರರು ನನ್ನ ಗಂಡನನ್ನು ಬೆಳೆಸಿದ್ದಾರೆ. ಜಗದೀಶ್ ಶೆಟ್ಟರ್ ಅವರ ನಿರ್ಧಾರಕ್ಕೆ ನಾನು ಸಾಥ್ ನೀಡುತ್ತೇನೆ' ಎಂದು ಹೇಳಿದ್ದರು.
ಶಿಲ್ಪಾ ಶೆಟ್ಟರ್ ಅವರನ್ನು ಅಲ್ಲಿರುವ ಜನ ಸಮಾಧಾನಪಡಿಸಿ ಶೆಟ್ಟರ್ ಅವರನ್ನು ನಾವೂ ಗೆಲ್ಲಿಸಿಕೊಂಡು ಬರುತ್ತೇವೆ. ಆರಾಮಾಗಿರಿ ಎಂದು ಹೇಳಿದರು. ಆಗ ಶಿಲ್ಪಾ ಶೆಟ್ಟರ್ ಅವರು ಸಮಾಧಾನಗೊಂಡು ಕಣ್ಣೀರು ನಿಲ್ಲಿಸಿದರು.