ಬಿಜೆಪಿ ಬಿಟ್ಟೋಗಿರೋದು ನಾನೊಬ್ನೇನಾ, ನನ್ನ ಮೇಲೇಕೆ ಇಷ್ಟು ಹಠ | JANATA NEWS
ಹುಬ್ಬಳ್ಳಿ : ನನ್ನನ್ನು ಸೋಲಿಸಲು ಬಿಜೆಪಿ ನಾಯಕರಿಗೆ ಏಕಿಷ್ಟು ಹಠ? ಬೇರೆ ನಾಯಕರೂ ಬಿಜೆಪಿ ಬಿಟ್ಟು ಹೋಗಿದ್ದಾರೆ, ಅವರ ಮೇಲೆ ಹಠ ಏಕಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕೆಂಬ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರು ಕೂಡಾ ಮಂಗಳವಾರ ಪ್ರಮುಖರ ಸಭೆ ನಡೆಸಿ ನನ್ನನ್ನು ಸೋಲಿಸಲು ಆಂದೋಲನ ನಡೆಸಿದ್ದಾರೆ. ಬಡಪಾಯಿ ಶೆಟ್ಟರ್ ಅನ್ನು ಸೋಲಿಸುವ ಗುರಿಯನ್ನು ಬಿಜೆಪಿ ಮಾಡಿಕೊಂಡಿದೆ ಗೊತ್ತಾಗುತ್ತಿಲ್ಲ ಎಂದರು.
ಯಡಿಯೂರಪ್ಪ ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ನಾನು ಅತಿ ಹೆಚ್ಚು ಲೀಡ್ನಿಂದ ಗೆಲುವು ಸಾಧಿಸುತ್ತೇನೆ. ಒಬ್ಬ ಲಿಂಗಾಯತ ನಾಯಕನಿಂದ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡಲಿ ಅಥವಾ ಯಾವುದರಿಂದಾದಲೂ ಬರೆದು ಕೊಡಲಿ. ಯಡಿಯೂರಪ್ಪ ಎಷ್ಟೇ ಬೈದರು ಅದು ಅವರ ಆಶೀರ್ವವಚನ ಎಂದು ಭಾವಿಸುತ್ತೆನೆ ಎಂದು ಹೇಳಿದರು.
ಸೆಂಟ್ರಲ್ ಕ್ಷೇತ್ರ ಬರೀ ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತವಲ್ಲಾ. ಇದು ರಾಷ್ಟ್ರೀಯ ಸೆಂಟ್ರಲ್ ಆಗಿದೆ. ಅಮಿತ್ ಶಾ ಹುಬ್ಬಳ್ಳಿ ಮತ್ತು ಯಾದಗಿರಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಬೇಕು ಅಂತ ಭಾಷಣ ಮಾಡುತ್ತಿದ್ದಾರೆ. ಸ್ಮೃತಿ ಇರಾನಿ, ಯಡಿಯೂರಪ್ಪ ಮತ್ತು ಜೆಪಿ ನಡ್ಡಾ ಸಹ ನನ್ನ ಸೋಲಿಸಲು ಕರೆ ನೀಡಿದ್ದಾರೆ. ನನ್ನ ಮೇಲೆ ಎಲ್ಲರೂ ಮುಗಿ ಬಿದ್ದಿದ್ದಾರೆ. ಈ ಬಡಪಾಯಿ ಮೇಲೆ ಯಾಕೆ ಎಲ್ಲರೂ ಬಿದ್ದಿದ್ದಾರೆ ಗೊತ್ತಿಲ್ಲ.
ನಾನಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ, ಎನ್.ಆರ್. ಸಂತೋಷ್ ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷವನ್ನು ಸೇರ್ಪಡೆ ಆಗಿದ್ದಾರೆ. ಆದರೆ ನಾನು ಬಿಟ್ಟ ಮಾತ್ರಕ್ಕೆ ಯಾವುದೋ ಅಪರಾಧ ಮಾಡಿದಂತೆ ಎಲ್ಲರೂ ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಾನು ಬಿಜೆಪಿಗೆ ದ್ರೋಹ ಮಾಡಿದ್ದೆ ಎಂದು ಹೇಳುತ್ತಾರೆ. ಈ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಜಗದೀಶ್ ಶೆಟ್ಟರ್ ಎಂದೂ ಪಕ್ಷ ದ್ರೋಹ ಮಾಡಿಲ್ಲ. ನಾನು ಎಂದೂ ಬಿಜೆಪಿಗೆ ಮೋಸ ಮಾಡಿಲ್ಲ ಎಂದರು.