ಯಾವುದೇ ರೀತಿಯ ತನಿಖೆಗೆ ಸಿದ್ಧ, ಆದರೆ ಪಾರದರ್ಶಕವಾಗಿರಲಿ | JANATA NEWS
ಬೆಂಗಳೂರು : ಕಾಂಗ್ರೆಸ್ ಸರ್ಕಾರ ನಡೆಸುವ ಯಾವುದೇ ತನಿಖೆಯನ್ನು ನಾವು ಎದುರಿಸಲು ನಾವು ಸಿದ್ದ. ಆದರೆ ಈ ತನಿಖೆ ಪಾರದರ್ಶಕವಾಗಿರಲಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಅಕ್ರಮಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದು 15 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬೊಮ್ಮಾಯಿಯವರು, ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರಕ್ಕೆ ಹೆದರಲ್ಲ. ಯಾವುದೇ ಆರೋಪ ಇರಲಿ, ದೂರು ಇರಲಿ, ಯಾವುದೇ ತನಿಖೆ ಬೇಕಾದರೂ ನಡೆಸಲಿ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಎಂದು ಈ ಹಿಂದೆಯೇ ಹೇಳಿದ್ದೂ, ದೂರನ್ನೂ ನೀಡಿದ್ದೆ.
ಹೊಸ ಸರ್ಕಾರ ಬಂದಿದೆ ಯಾವುದೇ ರೀತಿ ತನಿಖೆ ನಡೆಸಲಿ. ತನಿಖೆ ಎದುರಿಸಲು ನಾವು ಸಿದ್ದ, ಆದರೆ ತನಿಖೆ ಪಾರದರ್ಶಕವಾಗಿರಲಿ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು. ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಇರಬಾರದು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಪಠ್ಯ ಪುಸ್ತಕ ಬದಲಾವಣೆ ವಿಚಾರವಾಗಿ ಮಾತನಾಡಿ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ವಿಚಾರಗಳ ಆಧಾರದ ಮೇಲೆ ಕೆಲವನ್ನು ಹೊಸದಾಗಿ ಪರಿಚಯ ಮಾಡಿದ್ವಿ. ಅವರು ಅದೇ ಜಾಡನ್ನು ಹಿಡಿದು ಹೊಸ ಕಮಿಟಿ ಮಾಡಲು ಹೊರಟಿದ್ದಾರೆ. ಇದಕ್ಕೆ ಸಮಾಜವೇ ಪ್ರತಿಕ್ರಿಯೆ ನೀಡಲಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪೋಷಕರು ಗಮನಿಸ್ತಿದ್ದಾರೆ. ಪಠ್ಯ ಪದೇ ಪದೇ ಬದಲಾವಣೆ ಇಂದ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂದರು.