ನಾಪತ್ತೆಯಾಗಿದ್ದ ನಂದಿಪರ್ವತ ಆಶ್ರಮದ ಜೈನಮುನಿ ಬರ್ಬರ ಹತ್ಯೆ, ಜೈನ ಮುನಿ ಶವ ಪತ್ತೆ | JANATA NEWS
ಬೆಳಗಾವಿ : ಬಸದಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಜೈನಮುನಿ ಬರ್ಬರ ಹತ್ಯೆಯಾಗಿರುವ ಘಟನೆ ಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ.
ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಹತ್ಯೆಯಾದವರು.
ಚಿಕ್ಕೋಡಿ ತಾಲೂಕು ಹಿರೇಕೋಡಿಯ ನಂದಿ ಪರ್ವತ ಜೈನ ಆಶ್ರಮದಿಂದ ನಾಪತ್ತೆಯಾಗಿದ್ದ ಮುನಿ ಆಚಾರ್ಯ ಶ್ರೀ 108 ಕಾಮ ಕುಮಾರ ನಂದಿ ಮಹಾರಾಜರ ಮೃತ ದೇಹ ಶುಕ್ರವಾರ ರಾತ್ರಿ ಹೀರೆಕೋಡಿಯ ಹೊರವಲಯದಲ್ಲಿ ಪತ್ತೆಯಾಗಿದೆ.
ಜೈನ ಮುನಿ ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದರು.
ಜುಲೈ 6ರಂದು ಬೆಳಗ್ಗೆ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಅವರ ಸಹಾಯಕಿ, ಸ್ವಾಮೀಜಿಯವರ ಕೊಠಡಿಗೆ ಸ್ವಾಮೀಜಿಯವರನ್ನು ಮಾತನಾಡಿಸಲು ಹೋಗಿದ್ದಾಗ ಅವರು ಅಲ್ಲಿರಲಿಲ್ಲ. ಇಡೀ ಆಶ್ರಮ ಹುಡುಕಿದರೂ ಸ್ವಾಮೀಜಿ ಸಿಕ್ಕಿರಲಿಲ್ಲ. ಆದರೆ, ಮಧ್ಯಾಹ್ನವಾದರೂ ಸ್ವಾಮೀಜಿ ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾಗಿರುವ ಬಗ್ಗೆ ಭಕ್ತರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಹತ್ಯೆಯ ಭಯಾನಕ ವಿಚಾರ ಹೊರಬಿದ್ದಿದೆ. ವಿಚಾರಣೆಗೊಳಪಟ್ಟವರಲ್ಲಿ ಒಬ್ಬನು ಸ್ವಾಮೀಜಿಯವರ ಹತ್ಯೆಯಾಗಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಹಂತಕರು ಸ್ವಾಮೀಜಿಯಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದು, ಆದರೆ, ವರ್ಷಗಳಾದರೂ ಸಾಲವನ್ನು ತೀರಿಸಿರಲಿಲ್ಲ, ಹಾಗಾಗಿ, ಸ್ವಾಮೀಜಿಯವರು ಹಣ ವಾಪಸ್ ಕೊಡುವಂತೆ ಪದೇ ಪದೇ ಕೇಳಲಾರಂಭಿಸಿದ್ದಕ್ಕೆ ಹಂತಕರು ಸ್ವಾಮೀಜಿಯವರನ್ನು ಹತ್ಯೆ ಮಾಡಿರುವುದಾಗಿ ಸಿಕ್ಕಿಬಿದ್ದಿರುವ ಹಂತಕರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ