ಜಾತಿಗಣತಿ ಮಾಡಿ ಏನು ಪುರುಷಾರ್ಥ ಸಾಧನೆ ಮಾಡುತ್ತಾರೆ? | JANATA NEWS

ರಾಮನಗರ : ಈ ಹಿಂದೆ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕಾಂತರಾಜು ಅವರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಿಡದಿಯ ತೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿ ಕೊಡಿಸಿದ್ವಿ ಕುಮಾರಸ್ವಾಮಿ ಒಪ್ಪಿಲ್ಲ ಎಂದು ಹೇಳುತ್ತಾರೆ. ಕಾಂತರಾಜು ವರದಿಯನ್ನು ಸದಸ್ಯ ಕಾರ್ಯದರ್ಶಿ ಸಹಿಯಾಗದೆ ನಾನು ಹೇಗೆ ವರದಿ ಒಪ್ಪಲಿ. ಸಮನ್ವಯ ಸಮಿತಿಯ ಅಧ್ಯಕ್ಷರು ಟವಲ್ ಕೊಡವಿ ಹೋಗುತ್ತಿದ್ದರು, ಯಾವತ್ತಾದರೂ ಈ ಬಗ್ಗೆ ಮಾತಾಡಿದ್ದರಾ? ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಜಾತ್ಯಾತೀತ ಪದ ತೆಗೆದುಹಾಕಿ ಎಂದು ಹೇಳುತ್ತಾರೆ. ಅದರ ಅರ್ಥವೇನು? ಜಾತ್ಯಾತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕೆಂದು ಅಲ್ವಾ ? ಇವರು ಜಾತಿಗಣತಿ ಮಾಡಿ ಯಾವ ಪುರುಷಾರ್ಥ ಸಾಧನೆ ಮಾಡುತ್ತಾರೆ. ಇದರ ಉಪಯೋಗ ಏನು..? ಸಮಾಜ ಹೊಡೆಯಲು ಮಾಡುತ್ತಾರೋ? ಸಮಾಜದಲ್ಲಿ ವಿಶ್ವಾಸಕ್ಕೆ ಧಕ್ಕೆ ತರಲು ಮಾಡುತ್ತಾರೋ ? ಒಗ್ಗಟ್ಟು ತರಲು ಮಾಡುತ್ತೀರೋ ಮೊದಲು ಅದನ್ನ ತಿಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.